ADVERTISEMENT

‘ಕೆಪಿಎಲ್ ಪ್ರಕರಣ: ಆರೋಪ ಸಾಬೀತಾದರೆ ಶಾಶ್ವತ ನಿಷೇಧ‘

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 19:24 IST
Last Updated 20 ಡಿಸೆಂಬರ್ 2019, 19:24 IST

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್‌ ಫಿಕ್ಸಿಂಗ್ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತರಾಗಿರುವ ಆರೋಪಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಒಂದೊಮ್ಮೆ ಆರೋಪಗಳು ಸಾಬೀತಾದರೆ ಅವರನ್ನು ಶಾಶ್ವತವಾಗಿ ನಿಷೇಧ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರೋಜರ್ ಬಿನ್ನಿ ಪ್ರಕಟಣೆ ನೀಡಿದ್ದಾರೆ.

ಶುಕ್ರವಾರ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ‘ಆಟಗಾರರಾದ ಸಿ.ಎಂ. ಗೌತಮ್, ಅಬ್ರಾರ್ ಖಾಜಿ, ಎಂ. ವಿಶ್ವನಾಥನ್, ನಿಶಾಂತ್ ಶೇಖಾವತ್ ಮತ್ತು ಕೋಚ್ ವಿನೂ ಪ್ರಸಾದ್ ಅವರನ್ನು ಅಮಾನತು ಮಾಡಲಾಗಿದೆ. ಇನ್ನೊಬ್ಬ ಆಟಗಾರ ಭಾವೇಶ್ ಗುಲೇಚಾ ಎಂಬುವವರು ತಮ್ಮನ್ನು ಸಂಪರ್ಕಿಸಿದ ಬುಕ್ಕಿಗಳ ಮಾಹಿತಿಯನ್ನು ಕೆಎಸ್‌ಸಿಎಗೆ ನೀಡಿರಲಿಲ್ಲ. ಆದ್ದರಿಂದ ಅವರನ್ನೂ ಅಮಾನತು ಮಾಡಲಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

‘ಇದೇ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಆಡಳಿತ ಮಂಡಳಿ ಸದಸ್ಯ ಸುಧೀಂದ್ರ ಶಿಂಧೆ ಅವರನ್ನೂ ಬಂಧಿಸಿದ್ದರು. ಅವರಿಗೆ ಕೆಎಸ್‌ಸಿಎ ಆಡಳಿತ ಮತ್ತು ಕ್ರಿಕೆಟ್ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಅವರು ಯಾವುದೇ ಸಭೆ ಮತ್ತಿತರ ಕಾರ್ಯಕ್ರಮಗಳಿಗೆ ಹಾಜರಾಗುವಂತಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ಈ ಪ್ರಕರಣದಲ್ಲಿ ಯಾವುದೇ ಫ್ರ್ಯಾಂಚೈಸಿ, ಅದರ ಮಾಲೀಕರು ಮತ್ತು ಆಟಗಾರರು ಅಪರಾಧಿ ಎಂದು ಸಾಬೀತಾದರೆ ತಕ್ಷಣವೇ ವಜಾಗೊಳಿಸಲಾಗುವುದು ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿನ್ನಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.