ADVERTISEMENT

ಕೆಎಸ್‌ಸಿಎ ಚುನಾವಣೆ: ಆಡಳಿತ ಚುಕ್ಕಾಣಿ ಹಿಡಿಯಲು 12 ಸ್ಪರ್ಧಿಗಳು

ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 19:25 IST
Last Updated 1 ಅಕ್ಟೋಬರ್ 2019, 19:25 IST

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಐದು ಪದಾಧಿಕಾರಿಗಳ ಸ್ಥಾನಗಳಿಗಾಗಿ 12 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

ಕಣದಲ್ಲಿ ಉಳಿದಿರುವ ಸ್ಪರ್ಧಾಳುಗಳ ಅಂತಿಮ ಪಟ್ಟಿಯನ್ನು ಚುನಾವಣಾಧಿಕಾರಿ ಎಂ.ಆರ್. ಹೆಗಡೆ ಅವರು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಪದಾಧಿಕಾರಿಗಳ ಸ್ಥಾನಕ್ಕೆ 12 ಅಭ್ಯರ್ಥಿಗಳು ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕ್ರಿಕೆಟಿಗ ರೋಜರ್ ಬಿನ್ನಿ ಮತ್ತು ಕ್ಯಾಪ್ಟನ್ ಹರೀಶ್ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಕಾರ್ಯದರ್ಶಿ ಸ್ಥಾನಕ್ಕೆ ಕೆ.ಎಸ್. ರಘುರಾಮ್ ಮತ್ತು ಸಂತೋಷ್ ಮೇನನ್ ಅವರು ಪೈಪೋಟಿಯಲ್ಲಿದ್ದಾರೆ. ಖಜಾಂಚಿ ಸ್ಥಾನಕ್ಕಾಗಿ ಬಿ.ಎನ್. ಮಧುಕರ್, ವಿ.ಎಸ್. ವೆಂಕಟೇಶಗೌಡ ಮತ್ತು ವಿನಯ್ ಮೃತ್ಯುಂಜಯ್ ಅವರು ಜಿದ್ದಾಜಿದ್ದಿ ನಡೆಸಿದ್ದಾರೆ.

ಉಳಿದಂತೆ ವ್ವವಸ್ಥಾಪನ ಮಂಡಳಿ ಸದಸ್ಯತ್ವಕ್ಕಾಗಿ 17 ಜನ ಸ್ಪರ್ಧಿಸಿದ್ದಾರೆ. ಗುರುವಾರ ಚುನಾವಣೆ ನಡೆಯಲಿದೆ.

ADVERTISEMENT

ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನವಾಗಿತ್ತು. ಒಟ್ಟು 39 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಹಿಂಪಡೆಯಲು ಮಂಗಳವಾರ ಕೊನೆಯ ದಿನವಾಗಿತ್ತು. 10 ನಾಮಪತ್ರಗಳನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಪಟ್ಟಿ

ಅಧ್ಯಕ್ಷ ಸ್ಥಾನ: ರೋಜರ್ ಬಿನ್ನಿ, ಕ್ಯಾಪ್ಟನ್ ಹರೀಶ್,

ಉಪಾಧ್ಯಕ್ಷ: ಜೆ. ಅಭಿರಾಮ್, ಜೋಸೆಫ್ ಹೂವರ್, ಸಿದ್ಧಲಿಂಗ ಸ್ವಾಮಿ.

ಕಾರ್ಯದರ್ಶಿ: ಕೆ.ಎಸ್. ರಘುರಾಮ್, ಸಂತೋಷ್ ಮೆನನ್.

ಜಂಟಿ ಕಾರ್ಯದರ್ಶಿ: ಪ್ರೀತ್ ಎಸ್. ಹೆಗಡೆ, ಶಾವೀರ್ ತಾರಾಪುರ್.‌

ಖಜಾಂಚಿ: ಬಿ.ಎನ್. ಮಧುಕರ್, ವಿ.ಎಸ್. ವೆಂಕಟೇಶ್ ಗೌಡ, ವಿನಯ್ ಮೃತ್ಯುಂಜಯ್

ಆಜೀವ ಸದಸ್ಯರು: ಬಿ. ಗುರುದತ್, ವಿ.ಎಂ. ಮಂಜುನಾಥ್, ಎನ್‌.ಎಸ್. ಶಾಂತಿ ಸ್ವರೂಪ್, ಬಿ. ಶ್ರೀಪತಿ ರಾವ್, ವಾಸುದೇವ್ ಎನ್. ಜೈಸಿಂಗ್.

ಸಂಸ್ಥೆ ಪ್ರತಿನಿಧಿಗಳು(ಬೆಂಗಳೂರು ವಲಯ): ಬದರೀನಾಥ್ ಕಾಮತ್ (ಮಲ್ಲೇಶ್ವರಂ ಯುನೈಟೆಡ್ ಸಿಸಿ), ಕೆ.ಎಂ. ಜಗದೀಶ್ (ಯಂಗ್ ಕ್ರಿಕೆಟರ್ಸ್), ಕೋಟಾ ಎಸ್. ಕೋದಂಡರಾಮ್ (ಸ್ವಸ್ತಿಕ್ ಯೂನಿಯನ್ ಸಿಸಿ), ಮೂಡು ಶೆದ್ದೆ ಸುಧಾಕರ್ ರಾವ್ (ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್), ಶಾಂತಾ ರಂಗಸ್ವಾಮಿ (ಮೌಂಟ್ ಜಾಯ್ ಸಿಸಿ), ತಿಲಕ್ ನಾಯ್ಡು ವಿ.ಎಸ್. (ಬೆಂಗಳೂರು ಕ್ರಿಕೆಟರ್ಸ್).

ವ್ವವಸ್ಥಾಪನ ಸಮಿತಿ ಸದಸ್ಯರು: ಮಂಗಳೂರು ವಲಯ: ಮಹಾಬಲ ಮಾರ್ಲಾ (ದಕ್ಷಿಣ ಕನ್ನಡ ಕ್ರಿಕೆಟ್ ಸಂಸ್ಥೆ, ಮಂಗಳೂರು), ರತನ್ ಕುಮಾರ್ (ಮಂಗಳೂರು ಸ್ಪೋರ್ಟ್ಸ್‌ ಕ್ಲಬ್, ಮಂಗಳೂರು). ರಾಯಚೂರು ವಲಯ: ಕುಶಾಲ್ ಪಾಟೀಲ (ಗಜಾನನ ಸಿಸಿ, ಬೀದರ್), ಸುಧೀಂದ್ರ ಪಿ. ಶಿಂಧೆ (ಕ್ರಿಕೆಟ್ ಕ್ಲಬ್ ಆಫ್ ರಾಯಚೂರು).

ಮೂವರು ಅವಿರೋಧ ಆಯ್ಕೆ

ಕೆಎಸ್‌ಸಿಎಯ ನಾಲ್ಕು ವಲಯಗಳಿಗೆ ವ್ಯವಸ್ಥಾಪನ ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ಅವರೆಲ್ಲರೂ ರೋಜರ್ ಬಿನ್ನಿ ನೇತೃತ್ವದ ಬಣದವರಾಗಿದ್ದಾರೆ.

ಸುಧಾಕರ್ ರೈ (ಮೈಸೂರು), ಕೆ. ಶಶಿಧರ್ (ತುಮಕೂರು), ಅವಿನಾಶ್ ಪೋತದಾರ (ಧಾರವಾಡ) ಮತ್ತು ಡಿ.ಎಸ್. ಅರುಣ್ (ಶಿವಮೊಗ್ಗ) ಅವರು ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.