ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಪ್ರಸರಣವನ್ನು ತಡೆಯಲು ಜುಲೈ 5ರಿಂದ ರಾಜ್ಯ ಸರ್ಕಾರವು ಪ್ರತಿ ಭಾನುವಾರ ಕರ್ಫ್ಯೂ ವಿಧಿಸಲಿದೆ. ಇದರಿಂದಾಗಿ ಜುಲೈ ಮೊದಲ ವಾರದಲ್ಲಿ ಕ್ರಿಕೆಟ್ ಚಟುವಟಿಕೆಗಳನ್ನು ಆರಂಭಿಸುವ ತನ್ನ ಯೋಜನೆಯನ್ನು ಮರುಪರಿಷ್ಕರಣೆಗೊಳಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಭೆ ನಡೆಸಲಿದೆ.
‘ಸರ್ಕಾರವು ಶನಿವಾರ ಈ ಪ್ರಕಟಣೆ ನೀಡಿದೆ. ಆದ್ದರಿಂದ ನಮ್ಮ ಮುಂದಿನ ಯೋಜನೆಯ ಬಗ್ಗೆ ಮತ್ತೆ ಯೋಚಿಸಬೇಕಿದೆ. ಭಾನುವಾರದಂದು ಸಂಪೂರ್ಣ ಲಾಕ್ಡೌನ್ ಇರುವುದರಿಂದಾಗಿ ಶಿಬಿರಗಳು, ಪಂದ್ಯಗಳನ್ನು ಆಯೋಜಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಕುರಿತು ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗುವುದು‘ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ಹೋದ ವಾರ ರಣಜಿ ಕ್ರಿಕೆಟ್ ತಂಡದ ಆಟಗಾರರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫಿಟ್ನೆಸ್ ಮತ್ತು ಯೋಗ ಶಿಬಿರ ಆರಂಭಿಸಲಾಗಿತ್ತು. ಆದರೆ ಶುಕ್ರವಾರದಿಂದ ಶಿಬಿರವನ್ನು ಸ್ಘಗಿತಗೊಳಿಸಲಾಯಿತು. ಮುಂದಿನ ತಿಂಗಳಲ್ಲಿ ಲೀಗ್ ಟೂರ್ನಿಗಳನ್ನು ನಡೆಸಲೂ ಕೆಎಸ್ಸಿಎ ಯೋಜಿಸಿತ್ತು. ಆದರೆ ಅದನ್ನು ನಂತರ ಕೈಬಿಡಲಾಯಿತು. ಪರಿಸ್ಥಿತಿಯ ಅವಲೋಕನ ಮಾಡಿದ ನಂತರ ಟೂರ್ನಿಯ ಆಯೋಜನೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.