ಚೆನ್ನೈ: ತಂಡದಲ್ಲಿ ಯುವ ಆಟಗಾರರ ಜತೆ ಮುನ್ನುಗ್ಗುವುದು ಕಷ್ಟದ ವಿಚಾರ. ಆದರೆ, 39 ವರ್ಷದ ತಮ್ಮ ದೈಹಿಕ ಸಾಮರ್ಥ್ಯದ ಬಗ್ಗೆ ಅವರು ಆಡಿಕೊಳ್ಳುವಂತಾಗದಿದ್ದರೆ ಅದುವೇ ದೊಡ್ಡ ಸಕಾರಾತ್ಮಕ ವಿಚಾರ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಹೇಳಿದ್ದಾರೆ.
ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ಧೋನಿ ಸದ್ಯ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದು, ವಯಸ್ಸಾಗುತ್ತಿದ್ದಂತೆ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಕಷ್ಟದ ವಿಚಾರ ಎಂದು ಹೇಳಿದ್ದಾರೆ.
‘ನೀವು ಆಟವಾಡುತ್ತಿರುವಾಗ ಅನ್ಫಿಟ್ (ದೈಹಿಕವಾಗಿ ಅಸಮರ್ಥ) ಎಂದು ಯಾರಿಂದಲೂ ಹೇಳಿಸಿಕೊಳ್ಳಲು ಬಯಸುವುದಿಲ್ಲ. ನಾನು ಯುವ ಆಟಗಾರರೊಂದಿಗೆ ಮುನ್ನುಗ್ಗಬೇಕಿದೆ. ಅವರು ತುಂಬಾ ವೇಗವಾಗಿ ಸಾಗುತ್ತಿದ್ದಾರೆ. ಈ ಸವಾಲು ಒಳ್ಳೆಯದು’ ಎಂದು ಧೋನಿ ಹೇಳಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಸೋಮವಾರ ರಾತ್ರಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 45 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಅವರು ಮಾತನಾಡಿದ್ದಾರೆ.
24ನೇ ವಯಸ್ಸಿನಲ್ಲಿದ್ದಾಗ ಫಾರ್ಮ್ ಬಗ್ಗೆ ನಾನು ಖಾತರಿ ನೀಡಿರಲಿಲ್ಲ. 40ನೇ ವಯಸ್ಸಿನಲ್ಲಿದ್ದಾಗಲೂ ನೀಡಲು ಸಾಧ್ಯವಾಗದು. ಆದರೆ, ಕನಿಷ್ಠ ‘ಅವನೊಬ್ಬ ಅಸಮರ್ಥ’ ಎಂದು ಯಾರೂ ನನ್ನತ್ತ ಬೆರಳು ತೋರಿಸುವಂತೆ ಆಗದಿದ್ದರೆ ಸಾಕು. ಅದುವೇ ನನ್ನ ಪಾಲಿಗೆ ದೊಡ್ಡ ಸಕಾರಾತ್ಮಕ ಅಂಶವಾಗಿರಲಿದೆ ಎಂದು ಧೋನಿ ಹೇಳಿದ್ದಾರೆ.
ತಂಡವು 180ಕ್ಕೂ ಹೆಚ್ಚು ರನ್ ಗಳಿಸಿದ್ದರಿಂದ ಸಂತಸವಾಗಿದೆ. ಆದರೆ ನಾವು ಇನ್ನೂ ಹೆಚ್ಚು ರನ್ ಗಳಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.
ಸ್ಯಾಮ್ ಅತ್ಯುತ್ತಮ ಬೌಲಿಂಗ್ ಮಾಡಿದರು. ಇಬ್ಬನಿ ಪರಿಣಾಮ ಚೆಂಡು ಒದ್ದೆಯಾದರೂ ಉತ್ತಮವಾಗಿ ಸ್ಪಿನ್ ಆಗುತ್ತಿತ್ತು. ಹೀಗಾಗಿ ಉತ್ತಮ ಆರಂಭ ಬಹುಮುಖ್ಯವೆಂದು ಭಾವಿಸಿದ್ದೆ ಎಂದೂ ಧೋನಿ ಹೇಳಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೊಯಿನ್ ಅಲಿ ಆಲ್ರೌಂಡರ್ ಪ್ರದರ್ಶನ (26 ರನ್ ಹಾಗೂ 7 ರನ್ನಿಗೆ 3 ವಿಕೆಟ್) ಹಾಗೂ ರವೀಂದ್ರ ಜಡೇಜಾ ಉತ್ತಮ ಆಟದ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ದಾಖಲಿಸಿತ್ತು. ಇದರೊಂದಿಗೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.