ADVERTISEMENT

ವಿಂಡೀಸ್ ಪ್ರವಾಸಕ್ಕೆ ತಂಡ ಆಯ್ಕೆ; ಹಿಂದೆ ಸರಿದ ಧೋನಿ

ಎರಡು ತಿಂಗಳ ಬಿಡುವು ಪಡೆಯಲು ನಿರ್ಧಾರ

ರಾಯಿಟರ್ಸ್
Published 20 ಜುಲೈ 2019, 17:04 IST
Last Updated 20 ಜುಲೈ 2019, 17:04 IST
   

ಮುಂಬೈ: ಮುಂದಿನ ತಿಂಗಳ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲು ಮುಂಬೈನಲ್ಲಿ ಭಾನುವಾರ ಆಯ್ಕೆಗಾರರು ಸಭೆ ಸೇರಲಿದ್ದಾರೆ. ವಿಶ್ವಕಪ್‌ನಲ್ಲಿ ಕಾಡಿದ್ದ ನಾಲ್ಕನೇ ಕ್ರಮಾಂಕದ ಸಮಸ್ಯೆ ಬಗೆಹರಿಸುವುದು ಸಭೆಯ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಲಿದೆ.

ಪ್ರವಾಸಕ್ಕೆ ಲಭ್ಯವಿಲ್ಲ ಎಂದು ವಿಕೆಟ್‌ ಕೀಪರ್‌– ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್‌ ಧೋನಿ ಬಿಸಿಸಿಐಗೆ ತಿಳಿಸಿದ್ದಾರೆ. ವೆಸ್ಟ್‌ ಇಂಡೀಸ್‌ ಪ್ರವಾಸದ ಜೊತೆಗೆ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ವಿಶ್ವ ಟಿ–20 ಟೂರ್ನಿಗೆ ತಂಡವನ್ನು ಸಜ್ಜು ಗೊಳಿಸುವ ದೂರದೃಷ್ಟಿಯನ್ನಿಟ್ಟುಕೊಂಡು ಎಂ.ಎಸ್‌.ಕೆ.ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಕಾರ್ಯಪ್ರವೃತ್ತವಾ
ಗಬೇಕಾಗಿದೆ.

ಆಗಸ್ಟ್‌ 3ರಂದು ಆರಂಭವಾಗುವ ಈ ಪ್ರವಾಸದಲ್ಲಿ ಭಾರತ ಮೂರು ಟಿ–20, ಮೂರು ಏಕದಿನ ಮತ್ತು ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

ADVERTISEMENT

ಎಲ್ಲ ಮೂರೂ ಮಾದರಿಯ ತಂಡದಲ್ಲಿ ಆಡುವ ಕೆಲವರಿಗೆ ವಿಶ್ರಾಂತಿ ನೀಡಿ, ತಂಡದ ಕದ ಬಡಿಯುತ್ತಿರುವ ಕೆಲವು ಆಟಗಾರರನ್ನು ಪರೀಕ್ಷಿಸಲು ಅವಕಾಶ ಒದಗಿಸಲಿದೆ.

ನಾಲ್ಕನೇ ಕ್ರಮಾಂಕದಲ್ಲಿ ಸೂಕ್ತ ಆಟಗಾರನನ್ನು ಕಂಡುಕೊಳ್ಳಲು ತಂಡ ವಿಫಲವಾಗಿದೆ. ವಿಶ್ವಕಪ್‌ನಲ್ಲೂ ಇದು ಸಮಸ್ಯೆಯಾಗಿ ಕಾಡಿತ್ತು. ಹೀಗಾಗಿ ಹೊಸ ಆಟಗಾರರ ಸಾಮರ್ಥ್ಯ ಪರೀಕ್ಷೆಗೂ ಅವಕಾಶ ಸಿಗಬಹುದು.

ಧೋನಿ ಹಿಂದೆ ಸರಿಯಲು ನಿರ್ಧರಿಸಿರುವುದರಿಂದ ರಿಷಭ್‌ ಪಂತ್‌, ಎಲ್ಲ ಮೂರೂ ಮಾದರಿಯ ತಂಡಗಳಿಗೆ ವಿಕೆಟ್‌ ಕೀಪರ್‌ ಆಗುವ ನಿರೀಕ್ಷೆಯಿದೆ. ಟೆಸ್ಟ್‌ ತಂಡದಲ್ಲಿ ವೃದ್ಧಿಮಾನ್‌ ಸಹ ಎರಡನೇ ಕೀಪರ್‌ ಆಗಿ ಸ್ಥಾನ ಪಡೆಯಬಹುದು. ಆಲ್‌ರೌಂಡರ್‌ ವಿಜಯಶಂಕರ್‌ ಅವರನ್ನು ಈ ಸ್ಥಾನದಲ್ಲಿ ಆಡಿಸಲು ಒಲವು ತೋರಲಾಗಿತ್ತು. ಅವರು ವಿಶ್ವಕಪ್‌ ಸಂದರ್ಭದಲ್ಲೇ ಗಾಯಾಳಾಗಿ ಮರಳಿದ್ದರು. ಶಿಖರ್‌ ಧವನ್‌ ಬೆರಳಿನ ಗಾಯದಿಂದಾಗಿ ಕೆ.ಎಲ್‌.ರಾಹುಲ್‌ ಇನಿಂಗ್ಸ್‌ ಆರಂಭಿಸಬೇಕಾಯಿತು.

ಧೋನಿ ಸ್ಥಾನ ತುಂಬಬಲ್ಲ ಸಮರ್ಥ ಎಂದು ಬಿಂಬಿತವಾಗಿರುವ ರಿಷಭ್‌ ಪಂತ್‌ ವಿಶ್ವಕಪ್‌ನ ಕೊನೆಯ ಕೆಲವು ಪಂದ್ಯಗಳಲ್ಲಿ ಆ ಕ್ರಮಾಂಕದಲ್ಲಿ ಆಡಿದ್ದರು. ಕರ್ನಾಟಕದ ಮನೀಷ್‌ ಪಾಂಡೆ ಜೊತೆ ಶ್ರೇಯಸ್‌ ಅಯ್ಯರ್‌, ಶುಭಮನ್‌ ಗಿಲ್‌ ಅವರೂ ಪೈಪೋಟಿಯಲ್ಲಿದ್ದಾರೆ.

ಟಿ–20 ವಿಶ್ವ ಕಪ್‌ ಗಮನದಲ್ಲಿಟ್ಟುಕೊಂಡು ಭಾರತ ಟಿ–20 ಪಂದ್ಯಗಳತ್ತ ಹೆಚ್ಚು ಗಮನಹರಿಸಲಿದೆ.

ಈ ವಿಶ್ವಕಪ್‌ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಅದಕ್ಕೆ ಮೊದಲು ಭಾರತ ಕೆಲವು ತಂಡಗಳ ವಿರುದ್ಧ ಮೂರು ಪಂದ್ಯಗಳ ಟಿ–20 ಸರಣಿ ಆಡಲಿದೆ.

ವಿಂಡೀಸ್‌ ಪ್ರವಾಸದಿಂದ ಹಿಂದೆ ಸರಿದ ಧೋನಿ

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧ ಸರಣಿಗೆ ತಂಡವನ್ನು ಭಾನುವಾರ ಆಯ್ಕೆ ಮಾಡಲು ಮುಂಬೈನಲ್ಲಿ ಸಿದ್ಧತೆ ನಡೆದಿರುವಂತೆಯೇ, ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಅವರು ಕೆರೀಬಿಯನ್‌ ಪ್ರವಾಸಕ್ಕೆ ತಾವು ಲಭ್ಯ ಇರುವುದಿಲ್ಲ ಎಂದು ಹೇಳಿದ್ದಾರೆ. ಆದರೆ ತಕ್ಷಣದ ನಿವೃತ್ತಿ ಸಾಧ್ಯತೆಯನ್ನೂ ಅವರು ತಳ್ಳಿಹಾಕಿದ್ದಾರೆ

ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ವಿಶ್ವಕಪ್‌ ಸೆಮಿಫೈನಲ್‌ನಿಂದ ತಂಡ ಹೊರಬಿದ್ದ ನಂತರ ಜಾರ್ಖಂಡ್‌ ಆಟಗಾರ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಬಹುದೆಂಬ ಮಾತುಗಳು ಕೇಳಿಬಂದಿದ್ದವು.

ಇದರ ನಡುವೆಯೇ, ಟೆರಿಟೋರಿಯಲ್‌ ಆರ್ಮಿಯ ಪ್ಯಾರಾಮಿಲಿಟರಿ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಲು ಕ್ರಿಕೆಟ್‌ನಿಂದ ‘ಎರಡು ತಿಂಗಳು ಬ್ರೇಕ್‌’ ಪಡೆಯುವುದಾಗಿ ಧೋನಿ ಬಿಸಿಸಿಐಗೆ ತಿಳಿಸಿದ್ದಾರೆ. ಟೆರಿಟೋರಿಯಲ್‌ ಆರ್ಮಿಯ ಪ್ಯಾರಾಚೂಟ್‌ ರೆಜಿಮೆಂಟ್‌ನಲ್ಲಿ ಅವರು ಗೌರವ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯಲ್ಲಿದ್ದಾರೆ.

‘ಧೋನಿ ಸದ್ಯಕ್ಕೆ ಕ್ರಿಕೆಟ್‌ನಿಂದ ನಿವೃತ್ತರಾಗುವುದಿಲ್ಲ. ಪ್ಯಾರಾಮಿಲಿಟರಿ ರೆಜಿಮೆಂಟ್‌ನಲ್ಲಿ ಎರಡು ತಿಂಗಳು ಸೇವೆ ಸಲ್ಲಿಸುವುದಾಗಿ ಅವರುಈ ಹಿಂದೆಯೇ ಒಪ್ಪಿಕೊಂಡಿದ್ದರು. ನಾವು ಅವರ ನಿರ್ಧಾರವನ್ನು ನಾಯಕ ವಿರಾಟ್‌ ಕೊಹ್ಲಿ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಅವರಿಗೆ ತಿಳಿಸಿದ್ದೇವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಶನಿವಾರ ಮಾಹಿತಿ ನೀಡಿದ್ದಾರೆ.

ನಿವೃತ್ತಿಗೆ ನಿರಾಕರಿಸಿರುವ ಧೋನಿ ಅವರ ನಿರ್ಧಾರದಿಂದ ಈಗ ಚೆಂಡು ಆಯ್ಕೆಗಾರರ ಅಂಕಣಕ್ಕೆ ಬಿದ್ದಿದೆ. ವಿಂಡೀಸ್‌ ಪ್ರವಾಸಕ್ಕೆ 38 ವರ್ಷದ ಧೋನಿ ಅವರನ್ನು ಆಯ್ಕೆಗಾರರು ಕೈಬಿಡುವ ನಿರೀಕ್ಷೆಯಿತ್ತು.

‘ಆಯ್ಕೆ ಸಮಿತಿ ಈ ವಿಷಯದಲ್ಲಿ ಸ್ಪಷ್ಟ ನಿಲುವು ಹೊಂದಿದೆ. ಎಷ್ಟೇ ಮಹತ್ವದ ಆಟಗಾರ ಇರಲಿ, ಆತನಿಗೆ ನಿವೃತ್ತಿ ಹೊಂದುವಂತೆ ಹೇಳುವ ಅಧಿಕಾರ ಸಮಿತಿಗಿಲ್ಲ. ಆದರೆ ತಂಡದ ಆಯ್ಕೆ ವಿಷಯಕ್ಕೆ ಬಂದಾಗ ಅದರ ನಿರ್ಧಾರವೇ ಅಂತಿಮವಾಗುತ್ತದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಧೋನಿ ಹಿಂದೆ ಸರಿಯಲು ನಿರ್ಧರಿಸಿರುವುದರಿಂದ ರಿಷಭ್‌ ಪಂತ್‌, ಎಲ್ಲ ಮೂರೂ ಮಾದರಿಯ ತಂಡಗಳಿಗೆ ವಿಕೆಟ್‌ ಕೀಪರ್‌ ಆಗುವ ನಿರೀಕ್ಷೆಯಿದೆ. ಟೆಸ್ಟ್‌ ತಂಡದಲ್ಲಿ ವೃದ್ಧಿಮಾನ್‌ ಸಹ ಎರಡನೇ ಕೀಪರ್‌ ಆಗಿ ಸ್ಥಾನ ಪಡೆಯಬಹುದು.

ಟಿ–20 ವಿಶ್ವ ಕಪ್‌ ಗಮನದಲ್ಲಿಟ್ಟುಕೊಂಡು ಭಾರತ ಟಿ–20 ಪಂದ್ಯಗಳತ್ತ ಹೆಚ್ಚು ಗಮನಹರಿಸಲಿದೆ. ಈ ವಿಶ್ವಕಪ್‌ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಅದಕ್ಕೆ ಮೊದಲು ಭಾರತ ಕೆಲವು ತಂಡಗಳ ವಿರುದ್ಧ ಮೂರು ಪಂದ್ಯಗಳ ಟಿ–20 ಸರಣಿ ಆಡಲಿದೆ. ಧೋನಿ, ಚೆನ್ನೈ ಸೂಪರ್ ಕಿಂಗ್ಸ್‌ ಪರ ಐಪಿಎಲ್‌ನಲ್ಲಿ ಇನ್ನೊಂದು ವರ್ಷ ಆಡುವ ಸಾಧ್ಯತೆಯಿರುವುದರಿಂದ ‘ನಿವೃತ್ತಿ’ ವಿಷಯ ಅಷ್ಟು ಸರಳವಾಗಿಲ್ಲ ಎಂಬ ವಿಶ್ಲೇಷಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.