ADVERTISEMENT

ಪಾಕ್ ಜಯಕ್ಕೆ ಸಂಭ್ರಮಾಚರಣೆ: ಬಂಧಿತ ವಿದ್ಯಾರ್ಥಿಗಳ ಬಿಡುಗಡೆಗೆ ಮುಫ್ತಿ ಆಗ್ರಹ

ಪಿಟಿಐ
Published 28 ಅಕ್ಟೋಬರ್ 2021, 10:40 IST
Last Updated 28 ಅಕ್ಟೋಬರ್ 2021, 10:40 IST
ಮೆಹಬೂಬಾ ಮುಫ್ತ, ಎಎಫ್‌ಪಿ ಚಿತ್ರ
ಮೆಹಬೂಬಾ ಮುಫ್ತ, ಎಎಫ್‌ಪಿ ಚಿತ್ರ   

ಶ್ರೀನಗರ: ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯಗಳಿಸಿದ ನಂತರ ಪಾಕ್ ಆಟಗಾರರನ್ನು ಹೊಗಳಿ ವಾಟ್ಸ್‌ಆ್ಯಪ್ ಸ್ಟೇಟಸ್ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಆಗ್ರಾದ ಕಾಲೇಜೊಂದರಿಂದ ಬಂಧಿತರಾದ ಕಾಶ್ಮೀರಿ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಗುರುವಾರ ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದ ಆಗ್ರಾದ ರಾಜಾ ಬಲ್ವಂತ್ ಸಿಂಗ್ ಮ್ಯಾನೇಜ್‌ಮೆಂಟ್ ಟೆಕ್ನಿಕಲ್ ಕ್ಯಾಂಪಸ್‌ನ ವಿದ್ಯಾರ್ಥಿಗಳ ವಿರುದ್ಧ ಜಗದೀಶ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಬುಧವಾರ ಸಂಜೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಜಮ್ಮು ಮತ್ತು ಕಾಶ್ಮೀರ ಹಾಗೂ ಹೊರಗೆ ನಡೆಯುತ್ತಿರುವ ದಬ್ಬಾಳಿಕೆ ಖಂಡನೀಯ. ಎರಡು ವರ್ಷಗಳ ನಿಗ್ರಹದ ನಂತರ ಜಮ್ಮುವಿನ ಪರಿಸ್ಥಿತಿಯು ಭಾರತ ಸರ್ಕಾರದ ಕಣ್ಣು ತೆರೆಸಬೇಕಾಗಿತ್ತು. ಆದರೆ, ಬಿಜೆಪಿಯ ಹುಸಿ ದೇಶಪ್ರೇಮವು ಭಾರತದ ಕಲ್ಪನೆಯನ್ನು ಕಡೆಗಣಿಸುತ್ತಿದೆ. ಈ ವಿದ್ಯಾರ್ಥಿಗಳನ್ನು ತಕ್ಷಣವೇ ಬಿಡುಗಡೆ ಮಾಡಿ’ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.

ADVERTISEMENT

ಕ್ಯಾಂಪಸ್‌ನಲ್ಲಿ ಯಾವುದೇ ದೇಶವಿರೋಧಿ ಘೋಷಣೆಗಳು ಮೊಳಗಿಲ್ಲ ಎಂಬ ಆಗ್ರಾ ಕಾಲೇಜು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಡಲಾದ ಮಾಧ್ಯಮ ವರದಿಯನ್ನು ಅವರು ಟ್ಯಾಗ್ ಮಾಡಿದ್ದಾರೆ.

‘ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಲೇಜು ಅಧಿಕಾರಿಗಳು ದೂರು ನೀಡಿದ್ದಾರೆ ಎಂದೂ ಸಹ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.