ADVERTISEMENT

ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ವಿರುದ್ಧ ಮುರಳಿ ಕಿಡಿ

ಪಿಟಿಐ
Published 4 ಅಕ್ಟೋಬರ್ 2018, 19:01 IST
Last Updated 4 ಅಕ್ಟೋಬರ್ 2018, 19:01 IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಬಗ್ಗೆ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವೆಸ್ಟ್‌ ಇಂಡೀಸ್ ತಂಡದ ಎದುರಿನ ಟೆಸ್ಟ್ ಸರಣಿಯಲ್ಲಿ ನನ್ನನ್ನು ಆಯ್ಕೆ ಮಾಡದಿರುವ ಬಗ್ಗೆ ಯಾವುದೇ ಕಾರಣಗಳನ್ನೂ ಸಮಿತಿಯು ತಿಳಿಸಿಲ್ಲ. ಇದರಲ್ಲಿ ಸಂವಹನ ಲೋಪವಾಗಿದೆ’ ಎಂದು ವಿಜಯ್ ದೂರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್, ‘ನಮ್ಮಿಂದ ಯಾವುದೇ ಸಂವಹನ ಲೋಪವಾಗಿಲ್ಲ. ಸಮಿತಿಯ ಸದಸ್ಯ ದೇವಾಂಗ್ ಗಾಂಧಿಯವರು ವಿಜಯ್ ಅವರೊಂದಿಗೆ ಮಾತನಾಡಿದ್ದಾರೆ. ಎಲ್ಲ ಕಾರಣಗಳನ್ನೂ ವಿವರಿಸಿದ್ದಾರೆ’ ಎಂದಿದ್ದಾರೆ.

ADVERTISEMENT

ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು!
ರಾಜ್‌ಕೋಟ್:
ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಇಬ್ಬರು ಅಭಿಮಾನಿಗಳು ಮೈದಾನದೊಳಕ್ಕೆ ನುಗ್ಗಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಘಟನೆ ರಾಜ್‌ಕೋಟ್‌ನಲ್ಲಿ ನಡೆಯಿತು. ಅವರ ಮನವಿಗೆ ಸ್ಪಂದಿಸಿದ ಕೊಹ್ಲಿ ಸೆಲ್ಫಿ ತೆಗೆಸಿಕೊಂಡರು.

ಸ್ಥಳಕ್ಕೆ ಧಾವಿಸಿದ ಭದ್ರತಾ ಸಿಬ್ಬಂದಿಯು ಅವರಿಬ್ಬರನ್ನೂ ಹೊರಗೆ ಕಳಿಸಿದರು. ನಂತರ ಆಟ ಮುಂದುವರಿಯಿತು.

ಪೂಜಾರ ಕಿಸೆಯಲ್ಲಿ ನೀರಿನ ಬಾಟಲಿ!
ಗುರುವಾರ ತಮ್ಮ ತವರಿನ ಅಂಗಳದಲ್ಲಿ ಮಹತ್ವದ ಇನಿಂಗ್ಸ್‌ ಆಡಿದ ಚೇತೇಶ್ವರ್ ಪೂಜಾರ ಅವರ ಒಂದು ನಡೆಯು ಅಚ್ಚರಿಗೆ ಕಾರಣವಾಯಿತು. ಅವರು ತಮ್ಮ ಪ್ಯಾಂಟಿನ ಕಿಸೆಯಲ್ಲಿ ನೀರಿನ ಪುಟ್ಟ ಬಾಟಲಿಯನ್ನು ಇಟ್ಟುಕೊಂಡೇ ಬ್ಯಾಟಿಂಗ್ ಮಾಡಿದ್ದು ಟಿವಿ ಪರದೆಯಲ್ಲಿ ಕಂಡಾಗ ಅಭಿಮಾನಿಗಳು ಮತ್ತು ವೀಕ್ಷಕ ವಿವರಣೆಗಾರರು ಅಚ್ಚರಿಗೊಂಡರು. ರಾಜ್‌ಕೋಟ್‌ನಲ್ಲಿ ಬಿಸಿಲಿನ ಧಗೆ ವಿಪರೀತವಾಗಿದ್ದರಿಂದ ಪೂಜಾರ ಈ ಬಾಟಲಿಯಲ್ಲಿದ್ದ ನೀರನ್ನು ಕುಡಿಯುತ್ತಿದ್ದರು.

ದ್ರಾವಿಡ್ ಬಗ್ಗೆ ಮೆಚ್ಚುಗೆ
ಪೃಥ್ವಿ ಶಾ ಅವರು ಪದಾರ್ಪಣೆ ಪಂದ್ಯದಲ್ಲಿ ಶತಕ ಗಳಿಸುತ್ತಿದ್ದಂತೆ ಟ್ವಿಟರ್‌ನಲ್ಲಿ ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿಯಿತು.

ಭಾರತ ಎ ಮತ್ತು ಜೂನಿಯರ್ ತಂಡಗಳ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಪೃಥ್ವಿ ಆಡಿದ್ದರು. 19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ತಂಡಕ್ಕೆ ರಾಹುಲ್ ಕೋಚ್ ಆಗಿದ್ದರು. ಪೃಥ್ವಿ ನಾಯಕರಾಗಿದ್ದರು. ಪೃಥ್ವಿ ಯಶಸ್ಸಿನಲ್ಲಿ ರಾಹುಲ್ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.