ADVERTISEMENT

ಇನಿಂಗ್ಸ್‌ ಆರಂಭಿಸಲು ಆದ್ಯತೆ: ಶುಭಮನ್ ಗಿಲ್

ಪಿಟಿಐ
Published 10 ಸೆಪ್ಟೆಂಬರ್ 2020, 16:14 IST
Last Updated 10 ಸೆಪ್ಟೆಂಬರ್ 2020, 16:14 IST
ಶುಭಮನ್ ಗಿಲ್
ಶುಭಮನ್ ಗಿಲ್   

ಕೋಲ್ಕತ್ತ: ಇನಿಂಗ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡುವುದಕ್ಕೆ ಹೆಚ್ಚು ಆದ್ಯತೆ ಕೊಡುತ್ತೇನೆ ಎಂದು ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಆಟಗಾರ ಶುಭಮನ್ ಗಿಲ್ ಹೇಳಿದ್ದಾರೆ.

‘ಮೊದಲನೆಯದಾಗಿ ನಾನು ಆಡುವ ತಂಡವು ಪ್ರತಿ ಪಂದ್ಯದಲ್ಲಿಯೂ ಜಯಿಸಬೇಕು ಎನ್ನುವುದು ಗುರಿ. ನಾನು ಕ್ರೀಸ್‌ಗೆ ಬ್ಯಾಟಿಂಗ್ ಮಾಡಲು ಹೋದಾಗ ಯಾವ ರೀತಿ ರನ್‌ಗಳನ್ನು ಗಳಿಸಬೇಕು ಎನ್ನುವುದರ ಮೇಲಷ್ಟೇ ಗಮನ ಇರುತ್ತದೆ’ ಎಂದು ಪಂಜಾಬ್‌ ರಾಜ್ಯದ ಗಿಲ್ ಹೇಳಿದರು.

‘ನಾವು ಬಳಸುವ ಬ್ಯಾಟ್‌ಗಳನ್ನು ತೂಕ ಮತ್ತಿತರ ಕಾರಣಗಳಿಗಾಗಿ ಬದಲಿಸಬೇಕಿಲ್ಲ. ಇಲ್ಲಿಯ ನಿಧಾನಗತಿಯ ಪಿಚ್‌ಗಳ ಮೇಲೆ ಆಡುವುದು ತೊಂದರೆಯೆನಲ್ಲ. ಏಕೆಂದರೆ ನಾವು ಭಾರತದಲ್ಲಿ ಇಂತಹುದೇ ಪಿಚ್‌ಗಳ ಮೇಲೆ ಆಡಿದ ಅಭ್ಯಾಸ ಇದೆ. ಆತ್ಮವಿಶ್ವಾಸ ಮತ್ತು ಪರಿಸ್ಥಿತಿಗೆ ಹೊಂದಿಕೊಂಡು ಆಡುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಗಿಲ್ ಹೇಳಿದರು.

ADVERTISEMENT

ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಸೇರಿಕೊಳ್ಳುವ ಮುನ್ನ ಗಿಲ್ ಪಂಜಾಬ್‌ನಲ್ಲಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಬಳಿ ಕೆಲಕಾಲ ತರಬೇತಿ ಪಡೆದಿದ್ದರು.

‘ಯುವಿ ಮಾರ್ಗದರ್ಶನವು ಬಹಳ ಅತ್ಯಮೂಲ್ಯವಾಗಿತ್ತು. ಪಂಜಾಬ್ ಕ್ರಿಕೆಟಿಗರಿಗೆ ಅವರಿಂದ ತರಬೇತಿ ಸಿಗುತ್ತಿರುವುದು ಉತ್ತಮ ಬೆಳವಣಿಗೆ. ನೆಟ್ಸ್‌ನಲ್ಲಿ ಅವರೊಂದಿಗೆ ಅಭ್ಯಾಸ ಮಾಡುವಾಗ ಬ್ಯಾಟಿಂಗ್ ಕುರಿತ ಹಲವಾರು ವಿಷಯಗಳನ್ನು ಕಲಿತೆವು’ ಎಂದು ಹೇಳಿದರು.

‘ಕೆಕೆಆರ್ ತಂಡದ ಸಹಮಾಲೀಕ, ಬಾಲಿವುಡ್ ನಟ ಶಾರೂಕ್ ಖಾನ್ ಅವರು ನಾನು ಪದಾರ್ಪಣೆ ಮಾಡಿದ್ದ ಸಂದರ್ಭದಲ್ಲಿ ನೀಡಿದ್ದ ಪ್ರೇರಣೆಯ ಮಾತುಗಳನ್ನು ಮರೆಯಲು ಸಾಧ್ಯವಿಲ್ಲ. ಆಟದಂಗಳಕ್ಕೆ ಹೋಗು ನಿನ್ನ ಅಭಿವ್ಯಕ್ತಿಯನ್ನು ಆಟದ ಮೂಲಕ ತೋರಿಸೆಂದಷ್ಟೇ ಚುಟುಕಾಗಿ ಹೇಳಿದ್ದರು’ ಎಂದು ಶುಭಮನ್ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.