ಮಹಾರಾಜ ಟ್ರೋಫಿಯಲ್ಲಿ ಆಡಲಿರುವ ‘ಮೈಸೂರು ವಾರಿಯರ್ಸ್’ ತಂಡದೊಂದಿಗೆ ನಾಯಕ ಕರುಣ್ ನಾಯರ್, ಮಾಲೀಕ ಅರ್ಜುನ್ ರಂಗಾ ಹಾಗೂ ಮುಖ್ಯಕೋಚ್ ಆರ್ಎಕ್ಸ್ ಮುರಳಿ
– ಪ್ರಜಾವಾಣಿ ಚಿತ್ರ
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಸೋಮವಾರದಿಂದ (ಆ.11) ಆರಂಭಗೊಳ್ಳಲಿರುವ ‘ಮಹಾರಾಜ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿ’ಗೆ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ಶನಿವಾರ ತನ್ನ ತಂಡವನ್ನು ಪ್ರಕಟಿಸಿದ್ದು, ಅನುಭವಿ ಕರುಣ್ ನಾಯರ್ ತಂಡವನ್ನು ಮುನ್ನಡೆಸಲಿದ್ದಾರೆ.
ಈಚೆಗಷ್ಟೇ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರುಣ್ ಸದ್ಯ ಗಾಯಾಳುವಾಗಿದ್ದು, ಟೂರ್ನಿಯ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸ್ಟಾರ್ ಬ್ಯಾಟರ್ ಮನೀಷ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ. ಈ ಇಬ್ಬರ ಜೊತೆಗೆ ಪ್ರಸಿದ್ಧ್ ಕೃಷ್ಣ, ಕೆ. ಗೌತಮ್ರಂತಹ ಅನುಭವಿ ಆಟಗಾರರು ತಂಡದಲ್ಲಿದ್ದಾರೆ.
ತಂಡದ ಮಾಲೀಕ ಅರ್ಜುನ್ ರಂಗಾ, ‘ಕರುಣ್ ನಾಯರ್ ಕಳೆದ ಬಾರಿ ಟ್ರೋಫಿ ಗೆದ್ದಕೊಟ್ಟ ನಾಯಕ. ಈ ಬಾರಿಯೂ ಅವರು ವಾರಿಯರ್ಸ್ ಅನ್ನು ಮುನ್ನಡೆಸಲಿರುವುದು ಹೆಮ್ಮೆಯ ಸಂಗತಿ. ಮೈಸೂರಿನಲ್ಲಿಯೇ ಟೂರ್ನಿ ನಡೆಯುತ್ತಿರುವುದು ನಮಗೆ ಅನುಕೂಲ ಆಗಲಿದೆ. ಈ ಬಾರಿಯೂ ಟ್ರೋಫಿ ಗೆಲ್ಲಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಈ ಟೂರ್ನಿಯಲ್ಲೂ ತಂಡದ ಆಟಗಾರರು ತೆಗೆಯುವ ಪ್ರತಿ ವಿಕೆಟ್ಗೆ ‘₹2 ಸಾವಿರ, ಹೊಡೆಯುವ ಪ್ರತಿ ಸಿಕ್ಸರ್ಗೆ ₹1 ಸಾವಿರ ಮತ್ತು ಪ್ರತಿ ಫೋರ್ಗೆ ₹500 ದೇಣಿಗೆ ನೀಡಲಿದೆ’ ಎಂದರು.
‘ಮೈಸೂರು ವಾರಿಯರ್ಸ್ ತಂಡವು ಹೊಸ ಪ್ರತಿಭೆಗಳು ಮತ್ತು ಅನುಭವಿ ಆಟಗಾರರನ್ನು ಹೊಂದಿದೆ. ಈ ಬಾರಿಯೂ ಅಭಿಮಾನಿಗಳಿಗಾಗಿ ಅತ್ಯುತ್ತಮ ಪ್ರದರ್ಶನ ನೀಡಲಿದ್ದೇವೆ’ ಎಂದು ತಂಡದ ನಾಯಕ ಕರುಣ್ ನಾಯರ್ ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಏಷ್ಯಾದ ಮೊದಲ ವೀಲ್ಚೇರ್ ಕ್ರಿಕೆಟ್ ಲೀಗ್ ಆಗಿರುವ ಎಬಿಲಿಟಿ ಸ್ಪೋರ್ಟ್ಸ್ ಲೀಗ್ನಲ್ಲಿ (ಎಎಸ್ಎಲ್) ಪಾಲ್ಗೊಳ್ಳಲಿರುವ ಆಟಗಾರರಿಗೆ ಸೈಕಲ್ ಪ್ಯೂರ್ ಸಂಸ್ಥೆಯಿಂದ ಕ್ರೀಡಾ ಸಾಮಗ್ರಿ ನೀಡುವುದಾಗಿ ಘೋಷಿಸಲಾಯಿತು. ಮುಖ್ಯ ಕೋಚ್ ಆರ್ಎಕ್ಸ್ ಮುರಳಿ, ಕೆಎಸ್ಸಿಎ ಮೈಸೂರು ವಲಯ ಅಧ್ಯಕ್ಷ ಬಾಲಚಂದರ್, ಸಂಚಾಲಕ ಹರಿಕೃಷ್ಣ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.