ADVERTISEMENT

ಜನವರಿ ನಂತರ ಸಿಎಸಿ, ಆಯ್ಕೆ ಸಮಿತಿ ರಚನೆ ಸಾಧ್ಯತೆ

ಪಿಟಿಐ
Published 13 ಡಿಸೆಂಬರ್ 2019, 20:15 IST
Last Updated 13 ಡಿಸೆಂಬರ್ 2019, 20:15 IST
   

ನವದೆಹಲಿ: ಲೋಧಾ ಸಮಿ ತಿಯ ಕೆಲವು ಸುಧಾರಣೆಗಳ ತಿದ್ದುಪಡಿಗೆ ಸಂಬಂಧಿಸಿದ ತನ್ನ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿದ ನಂತರವಷ್ಟೇ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ), ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ರಚನೆ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಬದಲಾವಣೆ ಕುರಿತು ನಿರ್ಧಾರ ಮಾಡಲಿದೆ.

ಬಿಸಿಸಿಐ ಮನವಿಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಜನವರಿಯಲ್ಲಿ ವಿಚಾರಣೆ ನಡೆಸಲಿದೆ. ಹೀಗಾಗಿ ಶ್ರೀಲಂಕಾ ವಿರುದ್ಧ ಜನವರಿ 5ರಂದು ಆರಂಭವಾಗುವ ಮೂರು ಟ್ವೆಂಟಿ–20 ಪಂದ್ಯಗಳ ಸರಣಿಗೂ ಎಂ.ಎಸ್‌.ಕೆ.ಪ್ರಸಾದ್‌ ನೇತೃತ್ವದ ಸಮಿತಿಯೇ ತಂಡವನ್ನು ಆಯ್ಕೆ ಮಾಡಲಿದೆ. ಕೋರ್ಟ್‌ ವಿಚಾರಣೆಯ ನಂತರವೇ ಸಿಎಸಿ ಒಳಗೊಂಡಂತೆ ಹಲವು ವಿಷಯಗಳಲ್ಲಿ ಸ್ಪಷ್ಟತೆ ಸಿಗುವು ಕಾರಣ ಜನವರಿಯವರೆಗೆ ಕಾಯಲು ಹಿರಿಯ ಪದಾಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ. ರಾಷ್ಟ್ರೀಯ ಆಯ್ಕೆ ಸಮಿತಿಗೆ ಆಯ್ಕೆಗಾರರನ್ನು ನೇಮಕ ಮಾಡುವಾಗ ಸಂದರ್ಶನ ನಡೆಸಬೇಕೇ ಎಂಬುದೂ ತೀರ್ಮಾನವಾಗುವ ವಿಷಯಗಳಲ್ಲಿ ಒಳಗೊಂಡಿವೆ.

‘ಕೂಲಿಂಗ್‌ ಆಫ್‌ ನಿಯಮ’ದಲ್ಲಿ ರಿಯಾಯಿತಿ ನೀಡಬೇಕೆಂದು ಬಿಸಿಸಿಐ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದೆ. ಈ ನಿಯಮ ಸಡಿಲಿಸಿದಲ್ಲಿ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್‌ ಶಾ 10 ತಿಂಗಳ ಬದಲಿಗೆ ಪೂರ್ಣ ಅವಧಿಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಡಿ.1ರಂದು ನಡೆದ ಬಿಸಿಸಿಐನ ವಾರ್ಷಿಕ ಮಹಾಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಗಂಗೂಲಿ ಅವರು ಸಿಎಸಿ ರಚನೆ ಮತ್ತು ಹಿತಾಸಕ್ತಿ ಸಂಘರ್ಷ ನಿಯಮದ ವಿಷಯ ಪ್ರಸ್ತಾಪಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.