ಮುಂಬೈ: ಖ್ಯಾತ ಕ್ರಿಕೆಟ್ ಕೋಚ್ ಹಾಗೂ ಮುಂಬೈ ತಂಡದ ಮಾಜಿ ಆಟಗಾರ ವಾಸು ಪರಾಂಜಪೆ (82) ಸೋಮವಾರ ನಿಧನರಾದರು. ಅವರಿಗೆ ಪತ್ನಿ, ಭಾರತ ತಂಡದ ಮಾಜಿ ಆಟಗಾರ ಹಾಗೂ ಆಯ್ಕೆ ಸಮಿತಿ ಸದಸ್ಯ ಪುತ್ರ ಜತಿನ್ ಮತ್ತು ಇಬ್ಬರು ಪುತ್ರಿಯರಿದ್ದಾರೆ.
ವಾಸುದೇವ್ ಪರಾಂಜಪೆ ಅವರು ಭಾರತ ಕ್ರಿಕೆಟ್ನಲ್ಲಿ ಅದರಲ್ಲೂ ವಿಶೇಷವಾಗಿ ಮುಂಬೈ ಕ್ರಿಕೆಟ್ನಲ್ಲಿ ಕೋಚ್, ಅಯ್ಕೆಗಾರ, ಸಲಹೆಗಾರ ಸೇರಿದಂತೆ ಹಲವು ಹುದ್ದೆಗಳನ್ನು ಅವರು ನಿಭಾಯಿಸಿದ್ದರು.
ಖ್ಯಾತ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರಿಗೆ ‘ಸನ್ನಿ‘ ಎಂದು ಮೊದಲ ಬಾರಿ ಕರೆದವರು ವಾಸು.
29 ಪ್ರಥಮದರ್ಜೆ ಪಂದ್ಯಗಳಲ್ಲಿ ಆಡಿದ್ದ ವಾಸು ಅವರು ಎರಡು ಶತಕಗಳನ್ನು ಸಿಡಿಸಿದ್ದರು. ಆದರೆ ಆಟದಲ್ಲಿ ಹೆಚ್ಚು ಯಶಸ್ಸು ಸಾಧಿಸದಿದ್ದರೂ ಅವರನ್ನು ಪ್ರತ್ಯೇಕವಾಗಿ ನಿಲ್ಲುವಂತೆ ಮಾಡಿದ್ದು ಕ್ರಿಕೆಟ್ ಕುರಿತ ಅವರ ಜ್ಞಾನ ಮತ್ತು ಆಟಗಾರರ ಮನಸ್ಥಿತಿ ಅರಿತು ಕಾರ್ಯನಿರ್ವಹಿಸುತ್ತಿದ್ದ ಬಗೆ.
1987ರಲ್ಲಿ ಬಿಸಿಸಿಐ ಮೊದಲ ಬಾರಿ 15 ವರ್ಷದೊಳಗಿನವರ ರಾಷ್ಟ್ರೀಯ ಶಿಬಿರವನ್ನು ಇಂದೋರ್ನಲ್ಲಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ವಾಸು ಅವರಿಂದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿನೋದ್ ಕಾಂಬ್ಳಿ ಅವರಂತಹ ಖ್ಯಾತನಾಮರು ತರಬೇತಿ ಪಡೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.