ದೇವದತ್ತ ಪಡಿಕ್ಕಲ್
ಚಿತ್ರ: @ImTanujSingh
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ತಮಿಳುನಾಡು ತಂಡಗಳ ನಡುವಿನ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡ ದೇವದತ್ತ ಪಡಿಕ್ಕಲ್ ಅವರ ಅಮೋಘ ಶತಕದ ನೆರವಿನಿಂದ 145 ರನ್ಗಳ ಬೃಹತ್ ಗೆಲುವು ದಾಖಲಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಪರವಾಗಿ ಆರಂಭಿಕರಾದ ಮಯಾಂಕ್ ಅಗರವಾಲ್ (24 ರನ್) ಹಾಗೂ (ಬಿ.ಆರ್. ಸಮರ್ಥ್ 53 ರನ್) ಗಳಿಸುವ ಮೂಲಕ 69 ರನ್ಗಳ ಉತ್ತಮ ಆರಂಭ ನೀಡಿದರು.
ಮಯಾಂಕ್ ಅಗರವಾಲ್ ಔಟ್ ಆಗುತ್ತಿದ್ದಂತೆ ಕ್ರೀಸ್ಗೆ ಬಂದ ದೇವದತ್ತ ಪಡಿಕ್ಕಲ್ ತಮಿಳುನಾಡು ತಂಡದ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಅವರು ಕೇವಲ 46 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ ನೆರವಿನಿಂದ ಅಜೇಯ 102 ರನ್ ಗಳಿಸಿದರು. ಇವರ ಜೊತೆಗೆ ಸ್ಮರಣ್ ರವಿಚಂದ್ರನ್ ಅವರ (ಅಜೇಯ 46) ನೆರವಿನಿಂದ ಕರ್ನಾಟಕ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 245 ರನ್ ಕಲೆಹಾಕಿತು.
246 ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ತಮಿಳುನಾಡು ತಂಡ 14.2 ಓವರ್ಗಳಲ್ಲಿ ಕೇವಲ 100 ರನ್ಗಳಿಗೆ ಆಲೌಟ್ ಆಗುವ ಮೂಲಕ 145 ರನ್ಗಳ ಬೃಹತ್ ಅಂತರದ ಸೋಲು ಅನುಭವಿಸಿತು. ಬೌಲಿಂಗ್ನಲ್ಲಿ ಕರ್ನಾಟಕ ತಂಡದ ಪರ ಮಿಂಚಿದ ಶ್ರೇಯಸ್ ಗೋಪಾಲ್ (3), ಪ್ರವೀಣ್ ದುಬೆ (3) ವಿಕೆಟ್ ಪಡೆದರೆ, ವೈಶಾಕ್ ವಿಜಯಕುಮಾರ್ ಹಾಗೂ ಶುಭಾಂಗ್ ಹೆಗ್ಡೆ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.