ನವದೆಹಲಿ: ಟಿವಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತುಗೊಂಡಿರುವ ಭಾರತ ಕ್ರಿಕೆಟ್ ತಂಡದ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್.ರಾಹುಲ್, ಸೋಮವಾರ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿಥ್ ಕರಣ್’ ಸೆಲೆಬ್ರಿಟಿ ಚಾಟ್ ಕಾರ್ಯಕ್ರಮದಲ್ಲಿ ರಾಹುಲ್ ಮತ್ತು ಹಾರ್ದಿಕ್ ಭಾಗವಹಿಸಿದ್ದರು. ಅದರಲ್ಲಿ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಸಂಬಂಧ ಹಾರ್ದಿಕ್, ಟ್ವಿಟರ್ನಲ್ಲಿ ಕ್ಷಮೆ ಕೋರಿದ್ದರು. ಆದರೆ ರಾಹುಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಉಭಯ ಆಟಗಾರರಿಗೂ ಶೋಕಾಸ್ ನೋಟಿಸ್ ನೀಡಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), 24 ಗಂಟೆಗಳ ಒಳಗೆ ಉತ್ತರಿಸುವಂತೆ ಸೂಚಿಸಿತ್ತು.
‘ನಾವು ಕಳುಹಿಸಿದ್ದ ಶೋಕಾಸ್ ನೋಟಿಸ್ಗೆ ಇಬ್ಬರೂ ಉತ್ತರಿಸಿದ್ದಾರೆ. ತಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಅವರು ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅವರಿಗೆ ತಿಳಿಸಿದ್ದಾರೆ. ಉಭಯ ಆಟಗಾರರ ಕ್ರೀಡಾ ಬದುಕಿಗೆ ಯಾವುದೇ ತೊಂದರೆ ಮಾಡದೆ, ಬುದ್ಧಿ ಹೇಳುವಂತೆಯೂ ಸಿಇಒಗೆ ಸೂಚಿಸಿದ್ದಾರೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನೊಂದು ಅವಕಾಶ ನೀಡಿ: ರಾಹುಲ್ ಮತ್ತು ಪಾಂಡ್ಯ ಅವರಿಗೆ ಈಗಾಗಲೇ ತಪ್ಪಿನ ಅರಿವಾಗಿರಬಹುದು. ಅವರು ಮಾಡಿರುವ ತಪ್ಪನ್ನು ಮನ್ನಿಸಿ ಮತ್ತೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಅನುವು ಮಾಡಿಕೊಡಬೇಕು ಎಂದು ಅಂಪೈರ್ ಸೈಮನ್ ಟಫೆಲ್ ಹೇಳಿದ್ದಾರೆ.
‘ಜೀವನದಲ್ಲಿ ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಅವುಗಳಿಂದ ಎಲ್ಲರೂ ಪಾಠ ಕಲಿಯುತ್ತಾರೆ. ನಾನು ಕೂಡಾ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ಅವುಗಳನ್ನು ತಿದ್ದಿಕೊಂಡು ಮುನ್ನಡೆದಿದ್ದೇನೆ. ‘ಕಾಫಿ ವಿಥ್ ಕರಣ್’ ಕಾರ್ಯಕ್ರಮವನ್ನು ನಾನು ನೋಡುವುದಿಲ್ಲ. ರಾಹುಲ್ ಮತ್ತು ಪಾಂಡ್ಯ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಗ್ಗೆ ಓದಿ ತಿಳಿದುಕೊಂಡಿದ್ದೇನೆ. ಅವರಿಂದ ತಪ್ಪಾಗಿದೆ. ಅದನ್ನು ತಿದ್ದಿಕೊಳ್ಳಲು ಅವಕಾಶ ನೀಡಬೇಕು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.