ADVERTISEMENT

ಪ್ರತಿಭಾಶಾಲಿ ಪಂತ್ ಕೀಪಿಂಗ್‌ನಲ್ಲಿ ಶೈಶವಾವಸ್ಥೆಯಲ್ಲಿದೆ; ಕಿರ್ಮಾನಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 16:46 IST
Last Updated 9 ಫೆಬ್ರುವರಿ 2021, 16:46 IST
ಸೈಯದ್ ಕಿರ್ಮಾನಿ
ಸೈಯದ್ ಕಿರ್ಮಾನಿ   

ಪುಣೆ (ಪಿಟಿಐ): ಭಾರತ ತಂಡದ ಆಟಗಾರ ರಿಷಭ್ ಪಂತ್ ಅವರಲ್ಲಿ ದೈವದತ್ತವಾದ ಬ್ಯಾಟಿಂಗ್ ಪ್ರತಿಭೆಯಿದೆ. ಆದರೆ ವಿಕೆಟ್‌ಕೀಪಿಂಗ್‌ನಲ್ಲಿ ಅವರಿನ್ನೂ ತೊಟ್ಟಿಲಲ್ಲಿರುವ ಮಗುವಿನಂತಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ ಅಭಿಪ್ರಾಯಪಟ್ಟರು.

ಪುಣೆಯಲ್ಲಿ ಮಂಗಳವಾರ ವಾಕ್‌ ಮತ್ತು ಶ್ರವಣ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

’ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಆಡುವ ಪ್ರತಿಭೆ ರಿಷಭ್‌ ಅವರಿಗೆ ಇದೆ. ಆದರೆ ವಿಕೆಟ್‌ಕೀಪಿಂಗ್‌ನಲ್ಲಿ ಇನ್ನೂ ಬಹಳ ಪಳಗಬೇಕಿದೆ. ಕೀಪಿಂಗ್‌ನ ಮೂಲತತ್ವಗಳನ್ನು ಅಭ್ಯಾಸ ಮಾಡಬೇಕಿದೆ. ವೇಗದ ಬೌಲರ್‌ಗಳಿಗೆ ಕೀಪಿಂಗ್ ಮಾಡುವಾಗ ಚೆಂಡಿನ ಚಲನೆ, ವೇಗ ಮತ್ತು ತಿರುವುಗಳನ್ನು ಗುರುತಿಸಲು ಸಾಕಷ್ಟು ಸಮಯ ಇರುತ್ತದೆ. ತಾಳ್ಮೆಯಿಂದ ಕ್ಯಾಚ್ ಮಾಡಬೇಕು‘ ಎಂದು ಸಲಹೆ ನೀಡಿದರು.

ADVERTISEMENT

’ಬ್ಯಾಟಿಂಗ್‌ನಲ್ಲಿ ಆತ್ಮವಿಶ್ವಾಸದಿಂದ ಆಡುತ್ತಾರೆ. ಆದರೆ, ಪರಿಸ್ಥಿತಿ ಮತ್ತು ತಂಡದ ಅಗತ್ಯವನ್ನು ಅರಿತು ಆಡುವ ಗುಣ ಬೆಳೆಸಿಕೊಳ್ಳಬೇಕು. ಬ್ರಿಸ್ಬೇನ್‌ನಲ್ಲಿ ಅವರು ಮೊದಲ ಸಲ ತಂಡವನ್ನು ಗೆಲ್ಲಿಸಲು ಆಡಿ ಯಶಸ್ವಿಯಾದರು. ಆ ಮನೋಭಾವ ನಿರಂತರವಾಗಬೇಕು‘ ಎಂದು 72 ವರ್ಷದ ಕಿರ್ಮಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.