ಮುಂಬೈ: ನ್ಯೂಜಿಲೆಂಡ್ ತಂಡದ ಎಡಗೈ ಸ್ಪಿನ್ನರ್ ಎಜಾಜ್ ಪಟೇಲ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದ ರವಿಚಂದ್ರನ್ ಅಶ್ವಿನ್ ಡಿಆರ್ಎಸ್ ಮನವಿ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಆರ್. ಅಶ್ವಿನ್ ಶೂನ್ಯಕ್ಕೆ ಔಟ್ ಆದರು. ಎಜಾಜ್ ಎಸೆದ ಚೆಂಡು ಅಶ್ವಿನ್ ಅವರ ಬ್ಯಾಟ್ನ ಸೆರೆಯಿಂದ ನುಸುಳಿ ವಿಕೆಟ್ಗೆ ಬಡಿದಿತ್ತು. ಇದನ್ನು ಗಮನಿಸದ ಅಶ್ವಿನ್ ಅಂಪೈರ್ ತಪ್ಪಾದ ತೀರ್ಪು ನೀಡಿರಬೇಕು ಎಂದು ಭಾವಿಸಿ ತಕ್ಷಣ ಡಿಆರ್ಎಸ್ಗೆ ಮನವಿ ಮಾಡಿದರು.
ಬಳಿಕ ತನ್ನ ತಪ್ಪಿನ ಅರಿವಾಗಿ ಪೆವಿಲಿಯನ್ನತ್ತ ಅಶ್ವಿನ್ ಹೆಜ್ಜೆ ಹಾಕಿದರು. ಆದರೆ ವಾಂಖೆಡೆ ಸ್ಟೇಡಿಯಂನ ಸ್ಕ್ರೀನ್ನಲ್ಲಿ ಅಶ್ವಿನ್ ಬೌಲ್ಡ್ ಆದ ದೃಶ್ಯ ಪುನರಾವರ್ತನೆಗೊಂಡಿತು. ಬಳಿಕ ಡಿಆರ್ಎಸ್ ತೀರ್ಪು ಔಟ್ ಎಂದು ಸ್ಕ್ರೀನ್ನಲ್ಲಿ ಪ್ರಕಟಗೊಂಡಿತು.
ಡಿಆರ್ಎಸ್ಗೆ ಮನವಿ ಮಾಡಿದ ಅಶ್ವಿನ್ ಅವರ ನಿರ್ಧಾರದ ಬಗ್ಗೆ ಟ್ವೀಟ್ ಮಾಡಿರುವ ಆಸ್ಟ್ರೇಲಿಯಾದ ಮಾಜಿ ಎಡಗೈ ಸ್ಪಿನ್ನರ್ ಬ್ರಾಡ್ ಹಾಗ್ ಅವರು ಜೊತೆ ಆಟಗಾರ ಮಯಂಕ್ ಅಗರವಾಲ್ ಅವರಲ್ಲಿ ಮೊದಲು ವಿಚಾರಿಸಿಕೊಂಡು ಬಳಿಕ ಡಿಆರ್ಎಸ್ಗೆ ಮನವಿ ಮಾಡಬೇಕಿತ್ತು ಎಂದಿದ್ದಾರೆ.
'ಭಾರತ ತಂಡ ಅಶ್ವಿನ್ ಅವರ ತಪ್ಪು ನಿರ್ಧಾರದಿಂದ ಒಂದು ಡಿಆರ್ಎಸ್ ಅನ್ನು ನಷ್ಟ ಮಾಡಿಕೊಂಡಿತು. ಯಾಕೆ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆಂದು ಗೊತ್ತಾಗದಿದ್ದರೆ ಮೊದಲು ಜೊತೆ ಆಟಗಾರನ ಜೊತೆ ಕೇಳಿಕೊಳ್ಳಬೇಕು' ಎಂದು ಬ್ರಾಡ್ ಹಾಗ್ ಟ್ವೀಟ್ನಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.