ಬೆಂಗಳೂರು: ಕರ್ನಾಟಕ ತಂಡದ ಬ್ಯಾಟಿಂಗ್ ಲೈನ್ ಅಪ್ ನುಚ್ಚುನೂರು ಮಾಡಿದ ರೈಲ್ವೇಸ್ ತಂಡ ಬಿಸಿಸಿಐ ಆಯೋಜಿಸಿದ್ದ ಮಹಿಳೆಯರ ಏಕದಿನ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯರನ್ನು 74 ರನ್ಗಳಿಗೆ ಆಲೌಟ್ ಮಾಡಿದ ರೈಲ್ವೇಸ್ ಎಂಟು ವಿಕೆಟ್ಗಳಿಂದ ಗೆಲುವು ಸಾಧಿಸಿತು. ಈ ಮೂಲಕ 13ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
ಸುಲಭ ಗುರಿ ಬೆನ್ನತ್ತಿದ ರೈಲ್ವೇಸ್ನ ಆರಂಭಿಕ ಬ್ಯಾಟರ್ ಪೂನಂ ರಾವತ್ ಕೇವಲ ಎರಡು ರನ್ ಗಳಿಸಿ ಔಟಾಗಿದ್ದರು. ಆದರೆ ಮೇಘನಾ ಮತ್ತು ನುಶತ್ ಪರ್ವೀನ್ ಅವರು ಅಮೋಘ ಬ್ಯಾಟಿಂಗ್ ಮೂಲಕ ಮಿಂಚಿದರು. ಮೇಘನಾ (36; 43 ಎಸೆತ, 5 ಬೌಂಡರಿ, 1 ಸಿಕ್ಸರ್) ಔಟಾದ ನಂತರ ನುಶತ್ ಮತ್ತು ಹೇಮಲತಾ ಜೊತೆಗೂಡಿ ತಂಡವನ್ನು ದಡ ಸೇರಿಸಿದರು.
ಟಾಸ್ ಗೆದ್ದ ರೈಲ್ವೇಸ್ ನಾಯಕಿ ಮಿಥಾಲಿ ರಾಜ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಎರಡನೇ ಓವರ್ನ ಕೊನೆಯ ಎಸೆತದಲ್ಲೇ ಕರ್ನಾಟಕ ವಿಕೆಟ್ ಕಳೆದುಕೊಂಡಿತು. ನಂತರ ಬ್ಯಾಟರ್ಗಳನ್ನು ಸತತವಾಗಿ ರೈಲ್ವೇಸ್ ಕಾಡಿತು. ಡಿ.ದಿವ್ಯಾ, ಪ್ರತ್ಯೂಷಾ ಹಾಗೂ ನಿಕ್ಕಿ ಪ್ರಸಾದ್ ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಎರಡಂಕಿ ಮೊತ್ತ ದಾಟದೆ ವಾಪಸಾದರು. ನಾಯಕಿ ವೇದಾ ಕೃಷ್ಣಮೂರ್ತಿ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು.
ಸಂಕ್ಷಿಪ್ತ ಸ್ಕೋರು: ಕರ್ನಾಟಕ 38 ಓವರ್ಗಳಲ್ಲಿ 74ಕ್ಕೆ ಆಲೌಟ್ (ದಿವ್ಯಾ 12, ಪ್ರತ್ಯೂಷಾ 16, ನಿಕ್ಕಿ ಪ್ರಸಾದ್ 21; ಮೇಘನಾ ಸಿಂಗ್ 21ಕ್ಕೆ2, ರೇಣುಕಾ ಸಿಂಗ್14ಕ್ಕೆ4, ಸ್ನೇಹ್ ರಾಣಾ 10ಕ್ಕೆ2, ಸ್ವಾಗತಿಕಾ ರಥ್7ಕ್ಕೆ2); ರೈಲ್ವೇಸ್: 22.2 ಓವರ್ಗಳಲ್ಲಿ 2 ವಿಕೆಟ್ಗಳಿಗೆ 76 (ಮೇಘನಾ 36, ನುಶತ್ ಪರ್ವೀನ್ 20, ಹೇಮಲತಾ 17; ಸಹನಾ ಪವಾರ್ 19ಕ್ಕೆ1, ಎಸ್.ಆರ್.ಪಾಟೀಲ್ 15ಕ್ಕೆ1). ಫಲಿತಾಂಶ: ರೈಲ್ವೇಸ್ಗೆ 8 ವಿಕೆಟ್ಗಳ ಗೆಲುವು; ಪ್ರಶಸ್ತಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.