ಮೆಲ್ಬರ್ನ್: ಮಳೆಯ ಕಾರಣ ಭಾರತ ಕ್ರಿಕೆಟ್ ತಂಡಕ್ಕೆ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ.
ಜನವರಿ 7ರಿಂದ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ನಡೆಯಲಿದೆ. ಅದಕ್ಕೆ ಸಿದ್ಧತೆ ನಡೆಸುವ ಪ್ರವಾಸಿ ತಂಡದ ಯೋಚನೆಗೆ ಮಳೆ ಅಡ್ಡಿಮಾಡಿತು. ಹೀಗಾಗಿ ಆಟಗಾರರು ಜಿಮ್ನಲ್ಲಿ ದೈಹಿಕ ಕಸರತ್ತು ನಡೆಸುವುದಕ್ಕೆ ಸೀಮಿತಗೊಂಡರು.
‘ಮಳೆಯಿಂದಾಗಿ ಎಂಸಿಜಿಯಲ್ಲಿ ಭಾರತ ತಂಡ ಅಭ್ಯಾಸ ಅಧಿವೇಶವನ್ನು ರದ್ದುಗೊಳಿಸಲಾಯಿತು’ ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ.
ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ತಂಡಗಳು ಸೋಮವಾರ ಸಿಡ್ನಿಗೆ ತೆರಳಲಿವೆ.
ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ ಐವರು ಆಟಗಾರರು ಸದ್ಯ ಏಕಾಂತವಾಸದಲ್ಲಿದ್ದಾರೆ. ಜೈವಿಕ ಸುರಕ್ಷತಾ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಶುಕ್ರವಾರ ಈ ಆಟಗಾರರು ರೆಸ್ಟೊರೆಂಟ್ ಒಂದರ ಒಳಾಂಗಣದಲ್ಲಿ ಕುಳಿತು ಉಣ್ಣುತ್ತಿದ್ದ ದೃಶ್ಯದ ವಿಡಿಯೊವೊಂದನ್ನು ಅಭಿಮಾನಿಯೊಬ್ಬರು ಟ್ವಿಟರ್ನಲ್ಲಿ ಹರಿಬಿಟ್ಟಿದ್ದರು. ಬಿಸಿಸಿಐ ಹಿರಿಯ ಅಧಿಕಾರಿಗಳು ತನಿಖೆ ನಡೆಸುವ ಅಗತ್ಯವನ್ನು ಆರಂಭದಲ್ಲಿ ತಳ್ಳಿಹಾಕಿದ್ದರು. ಆದರೆ ಜಂಟಿಯಾಗಿ ತನಿಖೆ ನಡೆಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ನಂತರ ತಿಳಿಸಿತ್ತು.
ನಾಲ್ಕು ಟೆಸ್ಟ್ಗಳ ಸರಣಿ ಸದ್ಯ 1–1ರಲ್ಲಿ ಸಮನಾಗಿದೆ. ಪಿಂಕ್ ಬಾಲ್ ಟೆಸ್ಟ್ನಲ್ಲಿ ಹೀನಾಯವಾಗಿ ಸೋತಿದ್ದ ಭಾರತ, ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿ ಎಂಟು ವಿಕೆಟ್ಗಳ ಜಯಪಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.