ADVERTISEMENT

ರಾಜಸ್ಥಾನ ರಾಯಲ್ಸ್‌ ತೊರೆಯುವ ಊಹಾಪೋಹ: ಆರ್‌ಆರ್‌ನೊಂದಿಗೆ ಪಯಣ ಅದ್ಭುತ; ಸಂಜು

ಪಿಟಿಐ
Published 10 ಆಗಸ್ಟ್ 2025, 14:36 IST
Last Updated 10 ಆಗಸ್ಟ್ 2025, 14:36 IST
<div class="paragraphs"><p>ಸಂಜು ಸ್ಯಾಮ್ಸನ್ ಮತ್ತು ರಾಹುಲ್ ದ್ರಾವಿಡ್&nbsp;</p></div>

ಸಂಜು ಸ್ಯಾಮ್ಸನ್ ಮತ್ತು ರಾಹುಲ್ ದ್ರಾವಿಡ್ 

   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ವಿಕೆಟ್‌ಕೀಪರ್–ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ತೊರೆಯಲಿದ್ದಾರೆಂಬ ಊಹಾಪೋಹಗಳು ಕೇಳಿಬರುತ್ತಿವೆ.

ಸ್ವತಃ ಸಂಜು ಅವರೇ ತಮ್ಮನ್ನು ತಂಡದಿಂದ ಬಿಡುಗಡೆ ಮಾಡುವಂತೆ ಫ್ರ್ಯಾಂಚೈಸಿಗೆ ಮನವಿ ಮಾಡಿದ್ದಾರೆಂದೂ ಹೇಳಲಾಗುತ್ತಿದೆ. 2013ರಿಂದಲೂ ಅವರು ಈ ತಂಡದಲ್ಲಿದ್ದಾರೆ. ನಾಯಕತ್ವ ಕೂಡ ವಹಿಸಿದ್ದಾರೆ. 

ADVERTISEMENT

ಇದೇ ಹೊತ್ತಿನಲ್ಲಿ ಅವರು ಭಾರತ ತಂಡದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಅವರ ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ಕೂಡ ಗಮನ ಸೆಳೆಯುತ್ತಿದೆ. 

‘ರಾಜಸ್ಥಾನ ರಾಯಲ್ಸ್ ತಂಡವು ನನ್ನ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ. ಕೇರಳದ ಸಣ್ಣ ಹಳ್ಳಿಯೊಂದರಿಂದ ಬಂದ ನಾನು ಪ್ರತಿಭೆ ತೋರಿಸುವ ತವಕದಲ್ಲಿದ್ದೆ. ರಾಹುಲ್ (ದ್ರಾವಿಡ್) ಸರ್ ಮತ್ತು ಮನೋಜ್ ಬದಳೆ ಸರ್ ಅವರು ಪ್ರತಿಭೆ ಗುರುತಿಸಿದರು. ಜಗದ ಮುಂದೆ ಪ್ರತಿಭೆ ಪ್ರದರ್ಶಿಸಲು ಅವಕಾಶ ಒದಗಿಸಿಕೊಟ್ಟರು’ ಎಂದು ಸಂಜು ಹೇಳಿದ್ದಾರೆ. 

‘ಆ ಸಮಯದಲ್ಲಿ ಅವರು ನನ್ನ ಮೇಲೆ ನಂಬಿಕೆ ಇಟ್ಟರು. ನನ್ನ ಪಯಣದುದ್ದಕ್ಕೂ  ಪ್ರೋತ್ಸಾಹಿಸಿದರು. ಅವರಿಗೆ ನಾನು ಆಭಾರಿಯಾಗಿರುವೆ.  ಅದಕ್ಕಾಗಿಯೇ ಈ ಫ್ರ್ಯಾಂಚೈಸಿಯು ನನಗೆ ಬಹಳಷ್ಟು ಆಪ್ತವಾಗಿದೆ’ ಎಂದರು. 

ಆರ್. ಅಶ್ವಿನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಬಿಡುಗಡೆ ಮಾಡಲು ಕೋರಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆಯು ಶುಕ್ರವಾರ ವರದಿ ಮಾಡಿತ್ತು. ಸಂಜು ಅವರು ರಾಯಲ್ಸ್‌ನಿಂದ ಚೆನ್ನೈಗೆ ಬರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಹೋದ ವರ್ಷ ಸಂಜು ಅವರು ಬಾಂಗ್ಲಾ ದೇಶ ಮತ್ತು ದಕ್ಷಿಣ ಆಫ್ರಿಕಾ ಎದುರಿನ ಟಿ20 ಪಂದ್ಯಗಳಲ್ಲಿ ಮೂರು ಶತಕ (ಐದು ಪಂದ್ಯಗಳನ್ನು ಆಡಿದ್ದರು) ಗಳಿಸಿದ್ದರು. 

‘ಟಿ20 ವಿಶ್ವಕಪ್ (2024) ಟೂರ್ನಿಯ ನಂತರ ಮಹತ್ವದ ಬದಲಾವಣೆಯಾಯಿತು. ಗೌತಮ್ (ಗಂಭೀರ್) ಅವರು ಬಂದರು ಮತ್ತು ಸೂರ್ಯ (ಯಾದವ್) ನಾಯಕರಾಗಿ ನೇಮಕವಾದರು. ಆ ಹೊತ್ತಿನಲ್ಲಿ ನಾವು ಆಂದ್ರದಲ್ಲಿ ನಡೆಯುತ್ತಿದ್ದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದೆ. ಇನ್ನೊಂದು ತಂಡದಲ್ಲಿ ಸೂರ್ಯ ಕೂಡ ಅಲ್ಲಿ ಆಡುತ್ತಿದ್ದರು. ಆಗ ಅವರು ನನ್ನ ಬಳಿ ಬಂದು ಒಳ್ಳೆಯ ಅವಕಾಶವೊಂದು ಸಿಗುತ್ತಿದ್ದೆ. ಏಳು ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲಿದ್ದೇವೆ. ಎಲ್ಲ ಪಂದ್ಯಗಳಲ್ಲಿಯೂ ಇನಿಂಗ್ಸ್ ಆರಂಭಿಸುವ ಅವಕಾಶವನ್ನು ಕೊಡುವೆ ಚೆನ್ನಾಗಿ ಆಡು ಅಂದಿದ್ದರು’ ಎಂದು ಸಂಜು ನೆನಪಿಸಿಕೊಂಡರು. 

‘ನಾಯಕನ ವಿಶ್ವಾಸದ ನುಡಿಗಳು ನನ್ನಲ್ಲಿ ಪುಳಕ ಮೂಡಿಸಿದ್ದವು. ಶ್ರೀಲಂಕಾದಲ್ಲಿ ಎರಡು ಪಂದ್ಯಗಳಲ್ಲಿ ಆಡಿದೆ. ಆದರೆ ಅಲ್ಲಿ ಹೆಚ್ಚು ರನ್ ಗಳಿಸಲಿಲ್ಲ. ಡ್ರೆಸಿಂಗ್ ರೂಮ್‌ನಲ್ಲಿ ಬೇಸರದಿಂದ ಕುಳಿತಾಗ ಗೌತಮ್ ಭಾಯ್ (ಗಂಭೀರ್) ನನ್ನ ಬಳಿ ಬಂದು ಏನಾಯಿತೆಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ನಾನು  ಬಹಳ ದಿನಗಳ ನಂತರ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಲಭಿಸಿದೆ. ಆದರೆ ಅವುಗಳನ್ನು ಬಳಸಿಕೊಳ್ಳುವಲ್ಲಿ ವಿಫಲನಾದೆ ಎಂದೆ. ಅದಕ್ಕೆ ಅವರು, ನೀನು 21 ಡಕ್ (ಸೊನ್ನೆ) ಗಳಿಸಿದರೆ ಮಾತ್ರ ತಂಡದಿಂದ ಕೈಬಿಡುವೆಯೆಂದರು. ಆ ಪದಗಳು ನನ್ನಲ್ಲಿ ಹೊಸ ವಿಶ್ವಾಸ ಮೂಡಿಸಿದವು. ಕೋಚ್ ಮತ್ತು ನಾಯಕ ಈ ರೀತಿಯ ವಿಶ್ವಾಸ ತೋರಿದಾಗ ನಮ್ಮ ಆತ್ಮಬಲ ವೃದ್ಧಿಯಾಗುತ್ತದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.