ADVERTISEMENT

ರಣಜಿ ಫೈನಲ್ | ಅರ್ಪಿತ್–ಪೂಜಾರ ಆಸರೆ: ಸವಾಲಿನ ಮೊತ್ತದತ್ತ ಸೌರಾಷ್ಟ್ರ

ಎರಡನೇ ದಿನ ಬಂಗಾಳಕ್ಕೆ ದಕ್ಕಿದ್ದು ಕೇವಲ 3 ವಿಕೆಟ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 8:44 IST
Last Updated 11 ಮಾರ್ಚ್ 2020, 8:44 IST
ಚೇತೇಶ್ವರ ಪೂಜಾರ ಮತ್ತು ಅರ್ಪಿತ್‌ ವಾಸುದೇವ
ಚೇತೇಶ್ವರ ಪೂಜಾರ ಮತ್ತು ಅರ್ಪಿತ್‌ ವಾಸುದೇವ    

ರಾಜ್‌ಕೋಟ್‌:ರಣಜಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆತಿಥೇಯ ಸೌರಾಷ್ಟ್ರ ತಂಡಬಂಗಾಳ ವಿರುದ್ಧ ಉತ್ತಮ ಮೊತ್ತ ಕಲೆಹಾಕುವತ್ತ ಹೆಜ್ಜೆ ಇಟ್ಟಿದೆ. ಮೊದಲ ದಿನ ಸಮಬಲದ ಹೋರಾಟ ಕಂಡುಬಂದಿತ್ತು. ಎರಡನೇ ದಿನದಾಟದಲ್ಲಿ ಆತಿಥೇಯರು ನಿಧಾನಗತಿಯ ಬ್ಯಾಟಿಂಗ್‌ ನಡೆಸಿದರಾದರೂ ಪ್ರಾಬಲ್ಯ ಮೆರೆದರು.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಮೈದಾನದಲ್ಲಿ ಸೋಮವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಆತಿಥೇಯರು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 206 ರನ್‌ ಗಳಿಸಿದ್ದರು.

ಒಂದು ಹಂತದಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು 163 ರನ್‌ ಗಳಿಸಿ ಸುಸ್ಥಿತಿಯಲ್ಲಿದ್ದ ಸೌರಾಷ್ಟ್ರ, ನಂತರ 45 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಮೂವರನ್ನು ಕಳೆದುಕೊಂಡಿತ್ತು.ಮೊದಲ ದಿನದಾಟದ ಕೊನೆಯ ಅವಧಿಯಲ್ಲಿ ಬಂಗಾಳ ಬೌಲರ್‌ಗಳು ಮಿಂಚು ಹರಿಸಿದ್ದರು. ಇದರಿಂದಾಗಿ ಸಾಧಾರಣ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿತ್ತು. ಆದರೆ, ಅದಕ್ಕೆ ಅನುಭವಿ ಚೇತೇಶ್ವರ ಪೂಜಾರ ಮತ್ತು ಅರ್ಪಿತ್‌ ವಾಸ್ವಡ ಅವಕಾಶ ನೀಡಲಿಲ್ಲ.

ADVERTISEMENT

ಎರಡನೇ ದಿನ ಬರೋಬ್ಬರಿ 297 ನಿಮಿಷ ಕ್ರೀಸ್‌ಗೆ ಅಂಟಿಕೊಂಡು ಆಡಿದ ಈ ಇಬ್ಬರೂ, 380 ಎಸೆತಗಳನ್ನು ಎದುರಿಸಿ 142ರನ್‌ ಕಲೆಹಾಕಿದರು. ಅಗತ್ಯ ಸಂದರ್ಭದಲ್ಲಿ ಆಕರ್ಷಕ ಇನಿಂಗ್ಸ್ ಕಟ್ಟಿದ ಅರ್ಪಿತ್‌ 287 ಎಸೆತಗಳಲ್ಲಿ 106 ರನ್ ಗಳಿಸಿ ಮಿಂಚಿದರು. ಅನುಭವಿ ಪೂಜಾರ 237 ಎಸೆತಗಳಿಂದ 36.93ರ ಸರಾಸರಿಯಲ್ಲಿ 66 ರನ್ ಗಳಿಸಿ ನೆರವಾದರು. ಹೀಗಾಗಿ ಎರಡನೇ ದಿನ ಪತನವಾದದ್ದು ಕೇವಲ ಮೂರೇ ವಿಕೆಟ್‌.

ಈ ಇಬ್ಬರು ಕೇವಲ 10ರನ್‌ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಪ್ರೇರಕ್‌ ಮಂಕಡ್‌ ಖಾತೆ ತೆರೆಯದೆ, 8ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇನ್ನೂ ದಿನಗಳ ಆಟ ಬಾಕಿಯಿದ್ದು,ಜಯದೇವ್‌ ಉನದ್ಕತ್‌ ಬಳಗ 8 ವಿಕೆಟ್‌ ನಷ್ಟಕ್ಕೆ 384 ರನ್‌ ಕಲೆಹಾಕಿದೆ. ಉಳಿದ ಎರಡು ವಿಕೆಟ್‌ಗಳಿಂದ ಮತ್ತಷ್ಟು ರನ್‌ ಗಳಿಸುವ ಲೆಕ್ಕಾಚಾರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.