
ಕೊಯ್ಲಿ
ಮೊಳಕಾಲ್ಮುರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್ಸಿಬಿ ಗೆಲುವು ಸಾಧಿಸಿದ್ದಕ್ಕೆ ತಾಲ್ಲೂಕಿನ ಮಾರಮ್ಮನಹಳ್ಳಿ ಗ್ರಾಮದ ಯುವಕರು ಮೇಕೆ ಬಲಿ ನೀಡಿ ವಿಕೃತಿ ಮೆರೆದಿದ್ದಾರೆ. ವಿರಾಟ್ ಕೊಹ್ಲಿ ಕಟೌಟ್ ಮುಂದೆ ಮೇಕೆ ಕತ್ತರಿಸಿ ರಕ್ತಾಭಿಷೇಕ ಮಾಡಿದ್ದ ಗ್ರಾಮದ ಮೂವರು ಯುವಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಸಣ್ಣಪಾಲಯ್ಯ, ಜಯಣ್ಣ, ತಿಪ್ಪೇಸ್ವಾಮಿ ವಿರುದ್ಧ ಪ್ರಾಣಿಬಲಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮೇ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ ಆರ್ಸಿಬಿ ತಂಡ ಸಿಎಸ್ಕೆ ತಂಡವನ್ನು ಸೋಲಿಸಿತ್ತು. ಇದಕ್ಕೆ ಅಪಾರ ಸಂಭ್ರಮ ವ್ಯಕ್ತಪಡಿಸಿದ್ದ ಗ್ರಾಮದ ಯುವಕರು ಮೇ 4ರಂದು ವಿರಾಟ್ ಕೊಹ್ಲಿ ಭಾವಚಿತ್ರಗಳ ಕಟೌಟ್ ಅಳವಡಿಸಿದ್ದರು. ಮೇಕೆಯೊಂದನ್ನು ಕಟೌಟ್ ಮುಂದೆ ಕತ್ತರಿಸಿ, ಕೊಯ್ಲಿ ಭಾವಚಿತ್ರಕ್ಕೆ ರಕ್ತಾಭಿಷೇಕ ಮಾಡಿದ್ದರು.
ಮೇಕೆಯೊಂದನ್ನು ತರುವ, ಮಚ್ಚಿನಿಂದ ತಲೆ ಕತ್ತರಿಸುವ, ಮೇಕೆ ಎತ್ತಿ ಕೊಯ್ಲಿ ಭಾವಚಿತ್ರಕ್ಕೆ ರಕ್ತ ಚಿಮ್ಮಿಸುವ ದೃಶ್ಯಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದಕ್ಕೆ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ವಿಡಿಯೊ ವೀಕ್ಷಿಸಿದ ಮೊಳಕಾಲ್ಮುರು ಠಾಣೆ ಪೊಲೀಸರು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಆರೋಪಿಗಳನ್ನು ಗುರುತಿಸಿ ಪ್ರಕರಣ ದಾಖಲು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.