ಕ್ರಿಕೆಟ್ (ಸಾಂದರ್ಭಿಕ ಚಿತ್ರ)
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಣ ಟಿ20 ಸರಣಿಯ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಿದ್ದು, ಸರಣಿಯ ಮೊದಲ ಪಂದ್ಯವು ಅಕ್ಟೋಬರ್ 6ರಂದು ಧರ್ಮಶಾಲಾ ಬದಲು ಗ್ವಾಲಿಯರ್ನಲ್ಲಿ ನಡೆಯಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಂಗಳವಾರ ತಿಳಿಸಿದೆ.
ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆ, ಧರ್ಮಶಾಲಾದ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಈ ಬದಲಾವಣೆ ಮಾಡಲಾಗಿದೆ ಎಂದು ಮಂಡಳಿಯ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಇದು ಗ್ವಾಲಿಯರ್ನ ಹೊಸ, ಶ್ರೀಮಂತ್ ಮಾಧವರಾವ್ ಸಿಂಧ್ಯಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಲಿದೆ. 2010ರಲ್ಲಿ ಭಾರತ– ದಕ್ಷಿಣ ಆಫ್ರಿಕಾ ಪಂದ್ಯದ ನಂತರ ಈ ನಗರದಲ್ಲಿ ಯಾವುದೇ ಪ್ರಮುಖ ಪಂದ್ಯ ನಡೆದಿಲ್ಲ. ಆ ಪಂದ್ಯದಲ್ಲಿ ಕ್ರಿಕೆಟ್ ಕಣ್ಮಣಿ ಸಚಿನ್ ತೆಂಡೂಲ್ಕರ್ ದ್ವಿಶತಕ ಹೊಡೆದಿದ್ದು, ಈ ಸಾಧನೆಗೈದ ಮೊದಲ ಬ್ಯಾಟರ್ ಎನಿಸಿದ್ದರು.
ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯ ಪಂದ್ಯಗಳ ಆತಿಥ್ಯದಲ್ಲೂ ಬದಲಾವಣೆ ಆಗಿದೆ. ಮೊದಲ ಟಿ20 ಪಂದ್ಯದ ಆತಿಥ್ಯ ವಹಿಸಬೇಕಿದ್ದ ಚೆನ್ನೈ, ಪರಿಷ್ಕೃತ ಪಟ್ಟಿಯ ಪ್ರಕಾರ ಎರಡನೇ ಟಿ20 ಪಂದ್ಯದ ಆತಿಥ್ಯ ವಹಿಸಲಿದೆ. ಕೋಲ್ಕತ್ತದ ಈಡನ್ಗಾರ್ಡನ್ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ.
ಮೊದಲ ಟಿ20 ಪಂದ್ಯ ಜನವರಿ 22ರಂದು (2025) ನಡೆಯಲಿದೆ. ಎರಡನೇ ಏಕದಿನ ಪಂದ್ಯವನ್ನು ಜನವರಿ 25ರಂದು ನಿಗದಿ ಮಾಡಲಾಗಿದೆ.
25ರಂದು ಪಂದ್ಯ ನಡೆಸಿದರೆ ತಮಗೆ ಗಣರಾಜ್ಯೋತ್ಸವ ಸಿದ್ಧತೆಗೆ ಭದ್ರತೆ ಒದಗಿಸಲು ಸಮಸ್ಯೆಯಾಗುವ ಸಾಧ್ಯತೆಯಿದೆ ಎಂದು ಕೋಲ್ಕತ್ತ ಪೊಲೀಸರು ಬಂಗಾಳ ಕ್ರಿಕೆಟ್ ಸಂಸ್ಥೆಗೆ ವಿನಂತಿ ಮಾಡಿದ ಕಾರಣ ವೇಳಾಪಟ್ಟಿಯಲ್ಲಿ ಬದಲಾವಣೆ ತರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.