ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂತ್, ಈ ಬಾರಿ ತಂಡ ಚೊಚ್ಚಲ ಟ್ರೋಫಿ ಜಯಿಸಲು ಸಂಪೂರ್ಣ ಸಾಮರ್ಥ್ಯ ಬಳಸಿ ಆಡುವುದಾಗಿ ಹೇಳಿದ್ದಾರೆ.
ಕಳೆದ ವರ್ಷ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು ₹27 ಕೋಟಿ ನೀಡಿ ಲಖನೌ ತಂಡ ಖರೀದಿಸಿತ್ತು.
'ನಾನು ತಂಡಕ್ಕಾಗಿ ನನ್ನ 200 ಪ್ರತಿಶತವನ್ನು ನೀಡುತ್ತೇನೆ. ಅದು ನಿಮಗೆ ನನ್ನ ಬದ್ಧತೆಯಾಗಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ನನ್ನ ಸಾಮರ್ಥ್ಯ ಮೀರಿ ಪ್ರಯತ್ನಿಸುತ್ತೇನೆ. ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಹೊಸ ಆರಂಭ ಮತ್ತು ಹೊಸ ಶಕ್ತಿಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಪಂತ್ ಹೊಸ ನಾಯಕನಾಗಿ ನೇಮಕಗೊಂಡ ನಂತರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನಾವು ಹೊಸ ಭರವಸೆ, ಆಕಾಂಕ್ಷೆ, ಹೊಸ ಆತ್ಮವಿಶ್ವಾಸದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸುತ್ತೇವೆ. ನಮ್ಮ ಹೊಸ ನಾಯಕ ರಿಷಭ್ ಪಂತ್ ಅವರನ್ನು ನಿಮ್ಮೆಲ್ಲರಿಗೂ ಪರಿಚಯಿಸಲು ನಾನು ಬಯಸುತ್ತೇನೆ’ಎಂದು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಹೇಳಿದ್ದಾರೆ.
ರಿಷಭ್ ಅವರು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು.
‘ಲಖನೌ ತಂಡವು ಉತ್ತಮವಾಗಿದೆ. ಯುವ ಮತ್ತು ಅನುಭವಿಗಳು ಇದ್ದಾರೆ. ಇದರಿಂದಾಗಿ ತಂಡವು ಸಮತೋಲನವಾಗಿದೆ. ಉನ್ನತ ಗುರಿಯತ್ತ ನಮ್ಮ ಪಯಣ ಆರಂಭವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಇಲ್ಲಿ ನಡೆದ ತಂಡದ ಆಟಗಾರರ ಪೋಷಾಕು ಅನಾವರಣ ಕಾರ್ಯಕ್ರಮದಲ್ಲಿ ರಿಷಭ್ ಅವರನ್ನು ನಾಯಕರನ್ನಾಗಿ ಘೋಷಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.