ADVERTISEMENT

ಈಜುಕೊಳದಲ್ಲಿ ಹೆಜ್ಜೆ ಹಾಕಿದ ರಿಷಭ್ ಪಂತ್; ಅಭಿಮಾನಿಗಳ ಹಾರೈಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮಾರ್ಚ್ 2023, 14:36 IST
Last Updated 15 ಮಾರ್ಚ್ 2023, 14:36 IST
ರಿಷಭ್ ಪಂತ್
ರಿಷಭ್ ಪಂತ್   

ನವದೆಹಲಿ: ಕಳೆದ ವರ್ಷಾಂತ್ಯದಲ್ಲಿ ಕಾರು ಅಪಘಾತದಿಂದ ಪವಾಡ ಸದೃಶ್ಯ ಪಾರಾಗಿ ಸದ್ಯ ಚೇತರಿಕೆಯ ಹಂತದಲ್ಲಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಮಗದೊಂದು ವಿಡಿಯೊ ಹಂಚಿದ್ದಾರೆ.

ಈಜುಕೊಳದಲ್ಲಿ ಕೋಲಿನ ಸಹಾಯದಿಂದ ನಡೆದಾಡುವ ವಿಡಿಯೊವನ್ನು ರಿಷಭ್ ಹಂಚಿದ್ದಾರೆ. ಅಲ್ಲದೆ ಈ ನಡುವೆ ಚಿಕ್ಕದ್ದು ಹಾಗೂ ದೊಡ್ಡದು ಸೇರಿದಂತೆ ಎಲ್ಲ ಅಂಶಗಳಿಗೂ ಋಣಿಯಾಗಿದ್ದೇನೆ ಎಂದು ಉಲ್ಲೇಖ ಮಾಡಿದ್ದಾರೆ.

ಇದಕ್ಕೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಆದಷ್ಟು ಬೇಗನೇ ಗುಣಮುಖರಾಗುವಂತೆ ಶುಭ ಹಾರೈಸಿದ್ದಾರೆ.

ADVERTISEMENT

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ರಿಟ್ವೀಟ್ ಮಾಡಿದ್ದು, ನಿಮಗೆ ಮತ್ತಷ್ಟು ಬಲ ಸಿಗಲಿ ಚಾಂಪಿಯನ್ ಎಂದು ಹೇಳಿದೆ.

2022 ಡಿಸೆಂಬರ್ 30ರಂದು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ತಮ್ಮ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಹೊಸ ವರ್ಷಾಚರಣೆಗಾಗಿ ಪಂತ್ ರೂರ್ಕಿಯಲ್ಲಿರುವ ಮನೆಗೆ ಪ್ರಯಾಣಿಸುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿತ್ತು. ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಅದೃಷ್ಟವಶಾತ್ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಪಂತ್ ಅವರ ತಲೆ, ಬೆನ್ನು, ಮಂಡಿ, ಕಾಲಿಗೆ ಗಾಯಗಳಾಗಿದ್ದವು. ಬಲಗಾಲಿನ ಮಂಡಿಯ ಲಿಗಮೆಂಟ್ (ಅಸ್ಥಿರಜ್ಜು) ಗಾಯದಿಂದ ಚೇತರಿಸಿಕೊಳ್ಳಲು ಹಲವು ತಿಂಗಳುಗಳು ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.