ADVERTISEMENT

ಬೆಂಗಳೂರು ಎನ್‌ಸಿಎಯಲ್ಲಿ ’ಹಿಟ್‌ಮ್ಯಾನ್‘ ರೋಹಿತ್ ಶರ್ಮಾ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 3:15 IST
Last Updated 20 ನವೆಂಬರ್ 2020, 3:15 IST
ರೋಹಿತ್ ಶರ್ಮಾ   –ಸಾಂದರ್ಭಿಕ ಚಿತ್ರ
ರೋಹಿತ್ ಶರ್ಮಾ   –ಸಾಂದರ್ಭಿಕ ಚಿತ್ರ   

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೆಂಗಳೂರಿಗೆ ಬಂದಿದ್ದಾರೆ.

ಇಲ್ಲಿಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್‌ ಪುನಶ್ಚೇತನ ತರಬೇತಿಯಲ್ಲಿ ಅವರು ಪಾಲ್ಗೊಂಡಿದ್ದಾರೆ.

ADVERTISEMENT

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸೀಮಿತ ಓವರ್‌ಗಳ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿಲ್ಲ. ಅವರು ಐಪಿಎಲ್‌ನಲ್ಲಿ ಸ್ನಾಯುಸೆಳೆತದಿಂದಾಗಿ ಕೆಲವು ಪಂದ್ಯಗಳಲ್ಲಿ ಆಡಿರಲಿಲ್ಲ ಆದರೆ, ಪ್ಲೇ ಅಫ್‌ ಮತ್ತು ಫೈನಲ್‌ನಲ್ಲಿ ಆಡಿದ್ದರು. ಫೈನಲ್‌ನಲ್ಲಿ ಅವರು 68 ರನ್‌ಗಳನ್ನು ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ರೋಹಿತ್ ಅವರ ಫಿಟ್‌ನೆಸ್ ಪರೀಕ್ಷೆ ಇಲ್ಲಿ ನಡೆಯಲಿದೆ. ಬುಧವಾರ ನಡೆದ ಪರೀಕ್ಷೆಯಲ್ಲಿ ಅನುಭವಿ ಮಧ್ಯಮವೇಗಿ ಇಶಾಂತ್ ಶರ್ಮಾ ಅವರು ಉತ್ತಮವಾಗಿ ಪ್ರದರ್ಶನ ನೀಡಿದ್ದರು. ಒಂದೊಮ್ಮೆ ರೋಹಿತ್ ಫಿಟ್‌ ಎಂದು ಸಾಬೀತಾದರೆ, ಇಶಾಂತ್ ಅವರೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವರು. 14 ದಿನಗಳ ಪ್ರತ್ಯೇಕವಾಸಕ್ಕೆ ತೆರಳುವರು. ನಂತರ ತಂಡವನ್ನು ಸೇರಿಕೊಳ್ಳುವರು.

ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ನೇತೃತ್ವದ ವೈದ್ಯಕೀಯ ಮತ್ತು ತರಬೇತುದಾರರ ತಂಡವು ರೋಹಿತ್ ಮತ್ತು ಇಶಾಂತ್ ಅವರಿಗೆ ಮಾರ್ಗದರ್ಶನ ನೀಡಲಿದೆ.

ಆಸ್ಟ್ರೇಲಿಯಾದಲ್ಲಿ ನಡೆದ ಮೊದಲ ಟೆಸ್ಟ್ ನಂತರ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಲಿದ್ಧಾರೆ. ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ರೋಹಿತ್ ಅವರನ್ನು ಸೀಮಿತ ಓವರ್‌ಗಳ ತಂಡಕ್ಕೆ ಆಯ್ಕೆ ಮಾಡದಿರುವುದು ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಅವರಿಗೆ ತಂಡದ ನಾಯಕತ್ವ ನೀಡಬೇಕು ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್‌ನಲ್ಲಿ ಐದು ಸಲ ತಮ್ಮ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿರುವ ರೋಹಿತ್ ಅವರ ನಾಯಕತ್ವ ಗುಣಗಳು ದೇಶದ ತಂಡಕ್ಕೆ ಬಳಕೆಯಾಗಬೇಕು. ಸೀಮಿತ ಓವರ್‌ಗಳ ತಂಡದ ನಾಯಕತ್ವ ಮತ್ತು ಟೆಸ್ಟ್ ನಾಯಕತ್ವವನ್ನು ವಿಭಜಿಸಬೇಕು. ರೋಹಿತ್ ಮತ್ತು ಕೊಹ್ಲಿಯವರಿಬ್ಬರಿಗೂ ಅವಕಾಶವಾಗಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸೇರಿದಂತೆ ಕೆಲವರು ಅಭಿಪ್ರಾಯಪಟ್ಟಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.