ADVERTISEMENT

ಬೆಳಗಾವಿ ಆಟಗಾರನ ಕ್ಯಾಚ್ ನೋಡಿ ಸಚಿನ್ ತೆಂಡೂಲ್ಕರ್ ಫಿದಾ!

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 18:47 IST
Last Updated 12 ಫೆಬ್ರುವರಿ 2023, 18:47 IST
   

ಬೆಳಗಾವಿ: ಇಲ್ಲಿನ ವ್ಯಾಕ್ಸಿನ್ ಡಿಪೊ ಆವರಣದಲ್ಲಿ ಶನಿವಾರ ನಡೆದ ಟೆನಿಸ್‌ ಬಾಲ್ ಕ್ರಿಕೆಟ್ ಪಂದ್ಯದಲ್ಲಿ ಸ್ಥಳೀಯ ಆಟಗಾರ ಕಿರಣ ತರಳೇಕರ್ ಹಿಡಿದ ಅದ್ಭುತ ಕ್ಯಾಚ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರ ಗಮನಸೆಳೆದಿದೆ.

ಬೌಂಡರಿಯಾಚೆ ಹೋದ ಚೆಂಡನ್ನು ಕಿರಣ ಗಾಳಿಯಲ್ಲಿ‌‌ ನೆಗೆದು ಹಿಡಿದರು. ಬೌಂಡರಿ ಲೈನ್ ದಾಟುವ ಮುನ್ನ ಕೈಯಲ್ಲಿದ್ದ ಚೆಂಡನ್ನು ಮೇಲಕ್ಕೆಸೆದರು. ಅದೂ ಕೂಡ ಬೌಂಡರಿ ಆಚೆಗೇ ಬೀಳುತ್ತಿತ್ತು. ಕ್ಷಣಾರ್ಧದಲ್ಲೇ ಅದನ್ನರಿತ ಅವರು ಮತ್ತೆ ಗಾಳಿಯಲ್ಲಿ ಹಾರಿ ಚೆಂಡನ್ನು ಕಾಲಿನಿಂದ ಒದ್ದು ಗ್ರೌಂಡ್ ಒಳಕ್ಕೆ ಅಟ್ಟಿದರು. ಬೌಂಡರಿ ಆಚೆಗೆ ಹೋಗಿ ಮತ್ತೆ ಒಳಗೆ ಬಂದ ಚೆಂಡನ್ನು ಇನ್ನೊಬ್ಬ ಆಟಗಾರ ಕುನಾಲ್ ಕೊಂಡ ಹಿಡಿದರು. ಈ ದೃಶ್ಯ ಭಾನುವಾರ ಸಂಜೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು.

ಇದರ ವಿಡಿಯೊ ತುಣುಕನ್ನು ಹಾಕಿ ಟ್ವೀಟ್ ಮಾಡಿದ ತೆಂಡೂಲ್ಕರ್, ಕಿರಣ ಅವರ ಬೆನ್ನು ತಟ್ಟಿದ್ದಾರೆ. ‘ಫುಟ್‌ಬಾಲ್ ಕೂಡ ಆಡಲು ಗೊತ್ತಿರುವ ವ್ಯಕ್ತಿಯನ್ನು ನೀವು ಕ್ರಿಕೆಟ್‌ಗೆ ಕರೆತಂದಾಗ ಹೀಗೇ ಆಗುತ್ತದೆ...' ಎಂದು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ADVERTISEMENT

ಈ ಟ್ವೀಟ್‌ಗೆ 60 ಸಾವಿರ ಜನ ಲೈಕ್ ಮಾಡಿದ್ದು, 4,576 ಮಂದಿ ಮರುಟ್ವೀಟ್ ಹಾಗೂ 386 ಮಂದಿ ಕಮೆಂಟ್ ಮಾಡಿದ್ದಾರೆ. ನಿಪ್ಪಾಣಿಯ ಎಸ್ಆರ್‌ಎಸ್ ಹಾಗೂ ಬೆಳಗಾವಿಯ ಸಾಯಿರಾಜ್ ತಂಡಗಳ‌ ಮಧ್ಯೆ ಈ ಪಂದ್ಯ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.