ADVERTISEMENT

ಸ್ಮಿತ್‌ ವಿರುದ್ಧ ಘೋಷಣೆ ಕೂಗಬೇಡಿ: ಸರ್ಫರಾಜ್‌ ಅಹಮದ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 19:45 IST
Last Updated 11 ಜೂನ್ 2019, 19:45 IST
ಸರ್ಫರಾಜ್‌ ಅಹಮದ್‌
ಸರ್ಫರಾಜ್‌ ಅಹಮದ್‌   

ಟಾಂಟನ್‌: ಆಸ್ಟ್ರೇಲಿಯಾ ವಿರುದ್ಧ ಬುಧವಾರ ನಡೆಯಲಿರುವ ಪಂದ್ಯದ ವೇಳೆ ಆ ತಂಡದ ಆಟಗಾರ ಸ್ಟೀವನ್‌ ಸ್ಮಿತ್‌ ವಿರುದ್ಧ ಘೋಷಣೆಗಳನ್ನು ಕೂಗ ಬಾರದು ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್‌ ಅಹಮದ್‌ ಅವರು ತಂಡದ ಅಭಿಮಾನಿಗಳಿಗೆ ಮಂಗಳವಾರ ಮನವಿ ಮಾಡಿದ್ದಾರೆ.

ವೆಸ್ಟ್‌ ಕೌಂಟಿಯಲ್ಲಿ ನಡೆಯುವ ಪಂದ್ಯಕ್ಕೆ ಪಾಕಿಸ್ತಾನದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಭಾನುವಾರ ಭಾರತದ ಅಭಿಮಾನಿಗಳು ಓವಲ್‌ನಲ್ಲಿ ನಡೆದ ಪಂದ್ಯದ ವೇಳೆ ಸ್ಮಿತ್‌ ವಿರುದ್ಧ ‘ಚೀಟರ್‌’ ಎಂಬ ಘೋಷಣೆಗಳನ್ನು ಕೂಗಿದ್ದರು. ಅದು ಪುನರಾವರ್ತನೆಯಾಗಬಹುದೆಂಬ ಆತಂಕವಿದೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭದಲ್ಲಿ ಚೆಂಡನ್ನು ವಿರೂಪಗೊಳಿಸಿದ್ದಾರೆಂಬ ಆರೋಪದ ಮೇಲೆ ಒಂದು ವರ್ಷ ನಿಷೇಧ ಅನುಭವಿಸಿದ ನಂತರ ಸ್ಮಿತ್‌ ವಿಶ್ವಕಪ್‌ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ವಿರಾಟ್‌ ಕೊಹ್ಲಿ, ಸ್ಮಿತ್‌ ಅವರ ವಿರುದ್ಧ ಘೋಷಣೆ ಕೂಗಬಾರದೆಂದು ಪ್ರೇಕ್ಷಕರಿಗೆ ಮನವಿ ಮಾಡಿದ್ದರು. ಸ್ಮಿತ್‌ ಕ್ಷಮೆಯನ್ನೂ ಕೋರಿದ್ದರು. ಪಾಕಿಸ್ತಾನದವರು ಆ ರೀತಿ ಮಾಡಲಿಕ್ಕಿಲ್ಲ. ಅವರು ಕ್ರಿಕೆಟ್‌ ಪ್ರೀತಿಸುತ್ತಾರೆ. ಆಟಗಾರರನ್ನೂ ಪ್ರೀತಿ ಯಿಂದ ಕಾಣುತ್ತಾರೆ ಎಂದು ಸರ್ಫರಾಜ್‌ ವರದಿಗಾರರೆದುರು ವಿಶ್ವಾಸ ವ್ಯಕ್ತಪಡಿಸಿದರು.

ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 5–0 ಹಿನ್ನಡೆಯ ಆಗಿ ಹೋದ ಅಧ್ಯಾಯ. ನಾವೀಗ ನಾಳೆಯ ಪಂದ್ಯದ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಹೇಳಿದರು. ಸರ್ಫರಾಜ್‌ ಸೇರಿದಂತೆ ಆರು ಪ್ರಮುಖ ಆಟಗಾರರು ಆ ಸರಣಿಯಲ್ಲಿ ಆಡಿರಲಿಲ್ಲ.

ಟಾಂಟನ್‌ನಲ್ಲಿ ಮಳೆಯ ಮುನ್ಸೂಚನೆಯಿದ್ದು, ಈ ಬಗ್ಗೆ ಮಾತನಾಡಿದ ಅವರು ‘ಕಡಿಮೆ ಓವರುಗಳ ಪಂದ್ಯ ಆಡಲೂ ತಂಡ ಸಿದ್ಧವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.