ADVERTISEMENT

ಹಾಗಿದ್ರೆ ಮಾಡೆಲ್‌ಗಳನ್ನು ಆಯ್ಕೆ ಮಾಡಿ: ಸರ್ಫರಾಜ್‌ ಕಡೆಗಣನೆಗೆ ಗವಾಸ್ಕರ್ ಆಕ್ರೋಶ

ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿ ಇದ್ದರೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದಿರುವ ಸರ್ಫರಾಜ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 10:32 IST
Last Updated 20 ಜನವರಿ 2023, 10:32 IST
   

ಬೆಂಗಳೂರು: ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಮುಂಬೈನ ಯುವ ಬ್ಯಾಟರ್‌ ಸರ್ಫರಾಜ್‌ ಖಾನ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದೇ ನಿರ್ಲಕ್ಷ್ಯ ಮಾಡುತ್ತಿರುವ ಭಾರತ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ವಿರುದ್ಧ ಕ್ರಿಕೆಟ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಕಿಡಿ ಕಾರಿದ್ದಾರೆ.

ಸಣ್ಣಗೆ ತೆಳ್ಳಗೆ ಇರುವವರು ಬೇಕಿದ್ದರೆ, ಮಾಡೆಲ್‌ಗಳನ್ನು ತಂಡಕ್ಕೆ ಆಯ್ಕೆ ಮಾಡಿ ಎಂದು ಅವರು ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಶತಕಗಳ ಮೇಲೆ ಶತಕ ಬಾರಿಸುತ್ತಿರುವ ಅವರು ಮೈದಾನದಿಂದ ಹೊರಗುಳಿಯಬಾರದು. ಅವರು ಕ್ರಿಕೆಟ್‌ಗೆ ಸಮರ್ಥರಿದ್ದಾರೆ ಎನ್ನುವುದನ್ನು ಅವರ ಆಟವೇ ಹೇಳುತ್ತಿದೆ. ಸಣ್ಣಗೆ, ತೆಳ್ಳಗೆ ಇರುವವರನ್ನು ನೀವು ಹುಡುಕುತ್ತಿದ್ದರೆ, ಫ್ಯಾಷನ್‌ ಶೋಗೆ ತೆರಳಿ ಕೆಲವೊಂದು ಮಾಡೆಲ್‌ಗಳನ್ನು ಆಯ್ಕೆ ಮಾಡಿ ಅವರಿಗೆ ಬ್ಯಾಟ್, ಬಾಲ್‌ ಕೊಟ್ಟು ತಂಡದಲ್ಲಿ ಸೇರಿಸಿ. ನಮಲ್ಲಿ ಹಲವು ಆಕಾರಗಳ ಆಟಗಾರರು ಇದ್ದಾರೆ. ದೇಹದ ಆಕಾರದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಬೇಡಿ. ಅವರು ಗಳಿಸಿದ ರನ್‌ ಹಾಗೂ ಪಡೆದ ವಿಕೆಟ್‌ ಆಧಾರದಲ್ಲಿ ಅವರನ್ನು ಪರಿಗಣಿಸಿ‘ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ADVERTISEMENT

ಸದ್ಯ ಮುಂಬೈ ತಂಡದ ಪರ ರಣಜಿ ಆಡುತ್ತಿರುವ ಸರ್ಫರಾಜ್‌ ಖಾನ್‌ ಅತ್ಯುತ್ತಮ ಫಾರ್ಮ್‌ನಲ್ಲಿ ಇದ್ದಾರೆ.

2020ರ ಬಳಿಕ ಆಡಿರುವ 20 ಪಂದ್ಯಗಳಲ್ಲಿ ಅವರು 131.66 ರ ಸಾರಸರಿಯಲ್ಲಿ 2765 ರನ್‌ ಕಲೆ ಹಾಕಿದ್ದಾರೆ. ಒಂದು ತ್ರಿಶತಕ, ಎರಡು ದ್ವಿಶತಕ ಸೇರಿ ಒಟ್ಟು 12 ಶತಕಗಳು ಅವರ ಬ್ಯಾಟ್‌ನಿಂದ ಸಿಡಿದಿವೆ.

ಇಷ್ಟಾದರೂ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದೇ ಇರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.