ADVERTISEMENT

ಆಸ್ಪತ್ರೆಯಿಂದ ನಾಳೆ ಸೌರವ್ ಗಂಗೂಲಿ ಬಿಡುಗಡೆ: ಮನೆಯಲ್ಲೇ ವೈದ್ಯರ ನಿಗಾ

ಏಜೆನ್ಸೀಸ್
Published 5 ಜನವರಿ 2021, 8:03 IST
Last Updated 5 ಜನವರಿ 2021, 8:03 IST
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ   

ಕೋಲ್ಕತ್ತ: ಲಘು ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ (ಬಿಸಿಸಿಐ) ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವುಡ್‌ಲ್ಯಾಂಡ್ ಆಸ್ಪತ್ರೆಯ ಎಂಡಿ ಮತ್ತು ಸಿಇಒ ಡಾ. ರೂಪಾಲಿ ಬಸು ತಿಳಿಸಿದ್ದಾರೆ.

48 ವರ್ಷದ ಗಂಗೂಲಿ ಅವರ ಆರೋಗ್ಯದ ಕುರಿತು ಸುದ್ದಿಗಾರರರಿಗೆ ಮಾಹಿತಿ ನೀಡಿದ ಅವರು, ಗಂಗೂಲಿ ಮನೆಗೆ ತೆರಳಿದ ಬಳಿಕವೂ ವೈದ್ಯರ ತಂಡ ಮನೆಯಲ್ಲಿಯೇ ಅವರ ಆರೋಗ್ಯದ ನಿಗಾವಹಿಸುತ್ತದೆ. 2-3 ವಾರಗಳ ಬಳಿಕ ಮುಂದಿನ ಹಂತದ ವೈದ್ಯಕೀಯ ಚಿಕಿತ್ಸೆಗೆ ಸಿದ್ಧರಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಹೃದ್ರೋಗ ತಜ್ಞರಾದ ಡಾ. ದೇವಿ ಶೆಟ್ಟಿ ಅವರು ಗಂಗೂಲಿ ಅವರನ್ನು ನೋಡಿಕೊಳ್ಳುತ್ತಿದ್ದ ಒಂಬತ್ತು ವೈದ್ಯರ ತಂಡವನ್ನು ಭೇಟಿ ಮಾಡಿದ್ದಾರೆ ಮತ್ತು ನಂತರ ಮುಂದಿನ ಕ್ರಮವನ್ನು ಆಸ್ಪತ್ರೆಯು ನಿರ್ಧರಿಸಿದೆ.

ADVERTISEMENT

ಗಂಗೂಲಿ ಅವರಿಗೆ ಶನಿವಾರ ವ್ಯಾಯಾಮ ನಡೆಸುತ್ತಿದ್ದ ವೇಳೆ ಲಘು ಹೃದಯಾಘಾತ ಆಗಿತ್ತು. ಅವರ ಹೃದಯದ ರಕ್ತನಾಳಗಳಲ್ಲಿ ಬ್ಲಾಕ್‌ಗಳು ಕಂಡುಬಂದ ಕಾರಣ ಆ್ಯಂಜಿಯೊಪ್ಲಾಸ್ಟಿ ನಡೆಸಿ, ಒಂದು ಕಡೆ ಸ್ಟೆಂಟ್‌ ಅಳವಡಿಸಲಾಗಿತ್ತು. ಅಲ್ಲದೆ ಅಗತ್ಯ ಬಿದ್ದರೆ ಮತ್ತೊಮ್ಮೆ ಆ್ಯಂಜಿಯೊಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದೂ ವೈದ್ಯರು ಮಾಹಿತಿ ನೀಡಿದ್ದರು.

ಸೋಮವಾರವಷ್ಟೇ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ವುಡ್‌ಲ್ಯಾಂಡ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಸಿದ್ದರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ರಾಜ್ಯಸಭಾ ಸದಸ್ಯ ಸ್ವಪನ್ ದಾಸ್‌ಗುಪ್ತಾ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಬ್ದುಲ್ ಮನ್ನಾನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.