ನವದೆಹಲಿ: ಭಾರತ ಜೂನಿಯರ್ ಕ್ರಿಕೆಟ್ ತಂಡದ ಆಯ್ಕೆಗಾರ ಹುದ್ದೆಗೆ ಮಾಜಿ ಕ್ರಿಕೆಟಿಗ ಸುರೀಂದರ್ ಅಮರನಾಥ್ ಅರ್ಜಿ ಸಲ್ಲಿಸಿದ್ದಾರೆ.
ಈ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವೂ ಹೋದ ತಿಂಗಳು ಮುಕ್ತಾಯವಾಗಿದೆ. ಇದೇ ತಿಂಗಳು ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ದಿಗ್ಗಜ ಕ್ರಿಕೆಟಿಗ ಲಾಲಾ ಅಮರನಾಥ್ ಅವರ ಮಗ ಸುರೀಂದರ್, 10 ಟೆಸ್ಟ್ ಮತ್ತು ಮೂರು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. 145 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ ಎಂಟು ಸಾವಿರ ರನ್ ಗಳಿಸಿದ್ಧಾರೆ.
‘ನಮ್ಮ ರಾಷ್ಟ್ರೀಯ ತಂಡವು ಉತ್ತಮವಾಗಿ ಆಡುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ಕ್ರಿಕೆಟ್ ಚಟುವಟಿಕೆಗಳ ರೂಪುರೇಷೆ. ಉತ್ತಮ ಕ್ರಿಕೆಟಿಗರು ಬೆಳೆದು ಬರುತ್ತಿದ್ದಾರೆ. ಜೂನಿಯರ್ ಹಂತದಲ್ಲಿ ಉತ್ತಮ ಪ್ರತಿಭಾವಂತರನ್ನು ಬೆಳಕಿಗೆ ತರುವ ಆಸಕ್ತಿ ಇದೆ. ಬಿಸಿಸಿಐ ಅವಕಾಶ ಕೊಟ್ಟರೆ ಕಾರ್ಯನಿರ್ವಹಿಸುತ್ತೇನೆ‘ ಎಂದು 72 ವರ್ಷದ ಸುರೀಂದರ್ ಹೇಳಿದ್ದಾರೆ.
ಮೊರಾಕ್ಕೊದಲ್ಲಿ ಮೂರು ವರ್ಷ ಕ್ರಿಕೆಟ್ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಅನುಭವವೂ ಅವರಿಗೆ ಇದೆ. ಗೋವಾ ಕ್ರಿಕೆಟ್ ಸಂಸ್ಥೆ (ಜಿಸಿಎ)ಗೂ ಅವರು ಕೆಲವು ವರ್ಷ ಮುಖ್ಯ ಸಲಹೆಗಾರರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.