ADVERTISEMENT

ಸದ್ಯಕ್ಕೆ ಟಿ20 ವಿಶ್ವಕಪ್ ಅಪ್ರಸ್ತುತ; ಐಪಿಎಲ್ ಮೇಲೆ ಗಮನ: ಕೀರನ್ ಪೊಲಾರ್ಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2021, 13:54 IST
Last Updated 29 ಸೆಪ್ಟೆಂಬರ್ 2021, 13:54 IST
ಕೀರನ್ ಪೊಲಾರ್ಡ್
ಕೀರನ್ ಪೊಲಾರ್ಡ್   

ಅಬುಧಾಬಿ: ಸದ್ಯಕ್ಕೆ ಟ್ವೆಂಟಿ-20 ವಿಶ್ವಕಪ್ ಅಪ್ರಸ್ತುತವಾಗಿದ್ದು, ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರತ್ತ ಗಮನ ಕೇಂದ್ರಿಕರಿಸಿರುವುದಾಗಿ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ ತಿಳಿಸಿದ್ದಾರೆ.

ಮಂಗಳವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಈ ಮೂಲಕ ಸತತ ಸೋಲುಗಳ ಬಳಿಕ ಗೆಲುವಿನ ಹಾದಿಗೆ ಮರಳಿದೆ.ಅಲ್ಲದೆ ಪ್ಲೇ-ಆಫ್ ಪ್ರವೇಶ ಸಾಧ್ಯತೆಯನ್ನು ಜೀವಂತವಾಗಿರಿಸಿದೆ.

'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸಮಯದಲ್ಲಿ ವಿಶ್ವಕಪ್ ಅಪ್ರಸ್ತುತವಾಗಿದೆ. ನಾವು ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದೇವೆ. ಓರ್ವ ಆಟಗಾರನಾಗಿ ಈಗಿನ ಟೂರ್ನಿ ಬಗ್ಗೆ ಮಾತ್ರ ಯೋಚಿಸಲು ಬಯಸುತ್ತೇವೆ. ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಎಲ್ಲ ಆಟಗಾರರಿಗೂ ಆತ್ಮವಿಶ್ವಾಸವನ್ನು ತುಂಬುವುದರೊಂದಿಗೆ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಇದೇ ಆಟಗಾರರು ಈ ಹಿಂದೆಯೂ ಇದನ್ನು ಮಾಡಿ ತೋರಿಸಿದ್ದಾರೆ. ಹೊರಗೆ ಇರುವವರಿಗೆ ಕ್ರಿಕೆಟಿಗರು ಹೇಗೆ ಹಾದು ಹೋಗುತ್ತಾರೆ ಎಂಬುದು ಅರ್ಥವಾಗುವುದಿಲ್ಲ' ಎಂದು ತಿಳಿಸಿದರು.

'ಐಪಿಎಲ್‌ನಲ್ಲಿ ಆಡುವಾಗ ವಿಶ್ವಕಪ್ ಬಗ್ಗೆ ಏಕೆ ಯೋಚಿಸಲಿ? ಈಗಿನ ಪರಿಸ್ಥಿತಿಯನ್ನು ನಿಭಾಯಿಸೋಣ, ಪ್ರತಿಯೊಬ್ಬರು ಪಿಚ್‌ಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಯಾವಾಗಲೂ ನಿಮಗೆ ಬೇಕಾದುದನ್ನು ಪಡೆಯಲು ಸಾಧ್ಯವಿಲ್ಲ. ಓರ್ವ ವೃತ್ತಿಪರ ಆಟಗಾರನಾಗಿ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ವೈಯಕ್ತಿಕವಾಗಿ ನನಗೆ ವರ್ತಮಾನದಲ್ಲಿ ಉಳಿದುಕೊಂಡು ಒಂದು ತಂಡವಾಗಿ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸುವುದರಲ್ಲಿ ಗಮನ ಕೇಂದ್ರಿಕರಿಸಿದ್ದೇನೆ' ಎಂದು ತಿಳಿಸಿದರು.

'ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯ ಎಂಬುದು ನಮ್ಮ ನಂಬಿಕೆಯಾಗಿದೆ. ಮ್ಯಾನೇಜ್‌ಮೆಂಟ್ ಹಾಗೂ ಆಟಗಾರರು ಸಹ ಇದಕ್ಕೆ ಬದ್ಧರಾಗಿದ್ದಾರೆ' ಎಂದು ವಿವರಿಸಿದರು.

ಟಿ20 ಕ್ರಿಕೆಟ್‌ನಲ್ಲಿ 11,000ಕ್ಕೂ ಹೆಚ್ಚು ರನ್, 300 ವಿಕೆಟ್ ಹಾಗೂ 300ಕ್ಕೂಅಧಿಕ ಕ್ಯಾಚ್ ಪಡೆದ ವಿಶಿಷ್ಟ ದಾಖಲೆಯನ್ನು ಕೀರನ್ ಪೊಲಾರ್ಡ್ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.