ADVERTISEMENT

ಟಿ20 ವಿಶ್ವಕಪ್ ಟೂರ್ನಿ: ಚೇತನ್ ನೇತೃತ್ವದ ಆಯ್ಕೆ ಸಮಿತಿ ವಜಾ

ಪಿಟಿಐ
Published 18 ನವೆಂಬರ್ 2022, 19:30 IST
Last Updated 18 ನವೆಂಬರ್ 2022, 19:30 IST
ಸುನೀಲ್ ಜೋಶಿ ಮತ್ತು ಹರವಿಂದರ್ ಸಿಂಗ್ 
ಸುನೀಲ್ ಜೋಶಿ ಮತ್ತು ಹರವಿಂದರ್ ಸಿಂಗ್    

ನವದೆಹಲಿ: ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶನಿವಾರ ವಜಾ ಮಾಡಿದೆ.

ಆಸ್ಟ್ರೇಲಿಯಾದಲ್ಲಿ ಈಚೆಗೆ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಸೋಲಿನ ಪರಿಣಾಮವಾಗಿ ಬಿಸಿಸಿಐ ಈ ಕ್ರಮ ಕೈಗೊಂಡಿದೆ.

ಚೇತನ್ ಸೇರಿದಂತೆ ನಾಲ್ವರು ಇದ್ದ ಸಮಿತಿಯು ಅಧಿಕಾರ ವಹಿಸಿಕೊಂಡ ನಂತರ ಭಾರತ ತಂಡವು 2021ರ ಟಿ20 ಟೂರ್ನಿಯ ನಾಕ್‌ಔಟ್ ಹಂತ ತಲುಪುವಲ್ಲಿ ವಿಫಲವಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿಯೂ ಸೋತಿತ್ತು. ಈಚೆಗೆ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹೀನಾಯ ಸೋಲನುಭವಿಸಿತ್ತು. ಪ್ರತಿ ಬಾರಿ ತಂಡ ಸೋತಾಗಲೂ ಆಯ್ಕೆ ಪ್ರಕ್ರಿಯೆಗಳ ಕುರಿತು ಟೀಕೆಗಳು ಕೇಳಿಬಂದಿದ್ದವು.

ADVERTISEMENT

ಸಮಿತಿಯಲ್ಲಿ ಚೇತನ್ (ಉತ್ತರ ವಲಯ), ಹರವಿಂದರ್ ಸಿಂಗ್ (ಕೇಂದ್ರ ವಲಯ), ಸುನೀಲ್ ಜೋಶಿ (ದಕ್ಷಿಣ ವಲಯ) ಹಾಗೂ ದೇಬಾಶಿಶ್ ಮೊಹಾಂತಿ (ಪೂರ್ವವಲಯ) ಇದ್ದರು. ಅತ್ಯಂತ ಅಲ್ಪಾವಧಿ ಕಾರ್ಯನಿರ್ವಹಣೆ ಮಾಡಿದ ಸಮಿತಿ ಇದಾಗಿದೆ.

ರಾಷ್ಟ್ರೀಯ ಆಯ್ಕೆ ಸಮಿತಿಗೆ ಸಾಮಾನ್ಯವಾಗಿ ನಾಲ್ಕು ವರ್ಷಗಳ ಕಾರ್ಯಾವಧಿ ಇರುತ್ತದೆ. ಈ ಸಮಿತಿಯಲ್ಲಿ ಪಶ್ಚಿಮ ವಲಯದ ಪ್ರತಿನಿಧಿ ಇರಲಿಲ್ಲ. ಈ ಮುಂಚೆ ಇದ್ದ ಅಬೆ ಕುರುವಿಲಾ ಅವರ ಕಾರ್ಯಾವಧಿ ಮುಗಿದಿದೆ.

ಸೀನಿಯರ್ ಪುರುಷರ ತಂಡದ ಆಯ್ಕೆ ಸಮಿತಿಯ ಸದಸ್ಯರ ನೇಮಕಕ್ಕಾಗಿ ಶುಕ್ರವಾರ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನವೆಂಬರ್ 28 ಕೊನೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.