ADVERTISEMENT

ಏಷ್ಯಾ ಕಪ್ ಟ್ರೋಫಿ ‘ಹೊತ್ತೊಯ್ದ’ ನಕ್ವಿ

ಆರ್.ಕೌಶಿಕ್
Published 29 ಸೆಪ್ಟೆಂಬರ್ 2025, 23:33 IST
Last Updated 29 ಸೆಪ್ಟೆಂಬರ್ 2025, 23:33 IST
   

ದುಬೈ: ಗಲ್ಲಿ ಕ್ರಿಕೆಟ್‌ನಲ್ಲಿ ಔಟಾದ ತಕ್ಷಣ ಬ್ಯಾಟನ್ನು ತಾನೇ ತಂದೆ ಎಂದು ಮುನಿಸಿಕೊಂಡು ಮನೆಗೆ ಒಯ್ಯುವ ಹುಡುಗನ ರೀತಿಯ ವರ್ತನೆಯನ್ನು ನೆನಪಿಸುವಂತಿತ್ತು– ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಕ್ವಿ ನಡೆ.

ಏಷ್ಯಾ ಕಪ್ ಟಿ20 ಟೂರ್ನಿ ಗೆದ್ದ ನಂತರ ಭಾರತ ತಂಡವು, ಪಾಕಿಸ್ತಾನದ ಗೃಹ ಸಚಿವ ನಕ್ವಿ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ಸುತರಾಂ ಒಪ್ಪಲಿಲ್ಲ. ಏಷ್ಯಾ ಕ್ರಿಕೆಟ್‌ ಕೌನ್ಸಿಲ್ ಅಧ್ಯಕ್ಷರಾಗಿ ಟ್ರೋಫಿಪ್ರದಾನ ಮಾಡುವುದು ತಮ್ಮ ಹಕ್ಕು ಎಂದು ಪ್ರತಿಪಾದಿಸಿದ ನಕ್ವಿ ಅವರು ಟ್ರೋಫಿಯೊಡನೆ ಹೊರಟರು. ಅವರ ಪ್ರತಿಷ್ಠೆಗೆ ಪೆಟ್ಟುಬಿದ್ದಂತಾಗಿತ್ತು.

ಭಾರತ ತಂಡದ ಅಭೂತಪೂರ್ವ ಒಂಬತ್ತನೇ ಟ್ರೋಫಿ ಗೆಲುವಿನ ಸಂಭ್ರಮ ವನ್ನು,  ಪಂದ್ಯಾನಂತರದ ಈ ಅಹಿತಕರ ಬೆಳವಣಿಗೆಗಳು ಮಸುಕುಗೊಳಿಸಿದವು.

ADVERTISEMENT

ಪ್ರಶಸ್ತಿಪ್ರದಾನ ಸಮಾರಂಭ ಒಂದು ಗಂಟೆ ತಡವಾಯಿತು. ಅನೌನ್ಸರ್ ಆಗಿದ್ದ ನ್ಯೂಜಿಲೆಂಡ್‌ನ ಮಾಜಿ ವೇಗಿ ಸೈಮನ್ ಡೂಲ್ ಅವರು ‘ಭಾರತ ತಂಡ ಇವತ್ತಿನ ರಾತ್ರಿ ಟ್ರೋಫಿಯನ್ನು ಸ್ವೀಕರಿಸುತ್ತಿಲ್ಲ ಎಂದು ಎಸಿಸಿ ತನಗೆ ತಿಳಿಸಿದೆ. ಪಂದ್ಯಾನಂತರದ ಸಮಾರಂಭ ಇಲ್ಲಿಗೇ ಮುಗಿಸಲಾಗಿದೆ’ ಎಂದರು.

ನಕ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸಬಾರ ದೆಂಬುದು ತಂಡದ ನಿರ್ಧಾರವಾಗಿತ್ತು ಎಂದು ಮಧ್ಯರಾತ್ರಿ ಕಳೆದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ತಂಡದ ನಾಯಕ ಸೂರ್ಯಕುಮಾರ್ ಪ್ರತಿಕ್ರಿಯಿಸಿದರು. ಆಟಗಾರರೆಲ್ಲರೂ ಸೂಚನೆಗಳಂತೆ ನಡೆದುಕೊಳ್ಳುತ್ತಿದ್ದುದು ಸ್ಪಷ್ಟವಾಗಿತ್ತು. ಅದು ಯಾರದು ಎಂಬುದನ್ನು ಯಾರೂ ಊಹಿಸಬಹುದಿತ್ತು.

ಪ್ರಶಸ್ತಿ ಪ್ರದಾನ ಮಾಡುವುದ ಕ್ಕಾಗಿಯೇ ನಕ್ವಿ ಅವರು ಅಮೆರಿಕದಿಂದ ಭಾನುವಾರ ಬೆಳಗಿನ ಜಾವ ಇಲ್ಲಿಗೆ ತಲುಪಿದ್ದರು. ಏಪ್ರಿಲ್‌ 22ರ ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದ ಬಗ್ಗೆ ಭಾರತದ ನಿಲುವು ಅವರಿಗೆ ತಿಳಿಯದ ವಿಷಯೇನೂ ಆಗಿರಲಿಲ್ಲ. ಗಡಿ ಸಂಘರ್ಷದ ವೇಳೆ ಅವರು ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದರು.

ಆದರೆ ಎಸಿಸಿ ಅಧ್ಯಕ್ಷರೇ ರಜತ ಟ್ರೋಫಿ ಪ್ರದಾನ ಮಾಡಬೇಕೆಂಬ ನಿಯಮವೇನೂ ಇಲ್ಲ. ಲಿಖಿತವಾಗಿಯೂ ಇಲ್ಲ, ಸಂಪ್ರದಾಯವಾಗಿಯೂ ಇಲ್ಲ. 2022ರಲ್ಲಿ ಇಲ್ಲಿಯೇ (ದುಬೈ) ಶ್ರೀಲಂಕಾ ತಂಡ ಚಾಂಪಿಯನ್ ಆದಾಗ, ದಸುನ್ ಶನಕ ಅವರು ಶ್ರೀಲಂಕಾ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವ ಅವರಿಂದ ಟ್ರೋಫಿ ಸ್ವೀಕರಿಸಿದ್ದರು. ಆಗ ಎಸಿಸಿ ಮುಖ್ಯಸ್ಥರಾಗಿದ್ದವರು ಜಯ್‌ ಶಾ. ಈಗಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಅಧ್ಯಕ್ಷ.

ಅಭೂತಪೂರ್ವ ಎನ್ನುವಂತೆ ಭಾರತ ತಂಡದವರು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ಕಾದರು. ರಿಂಕು ಸಿಂಗ್ ವಿಜಯದ ಬೌಂಡರಿ ಗಳಿಸಿದ ತಕ್ಷಣ ಡ್ರೆಸಿಂಗ್ ರೂಮ್ ಸೇರಿಕೊಂಡಿದ್ದ ಸಲ್ಮಾನ್ ಆಘಾ ನೇತೃತ್ವದ ಪಾಕ್‌ ತಂಡದ ಆಟಗಾರರು 55 ನಿಮಿಷಗಳ ನಂತರ ಕ್ರೀಡಾಂಗಣಕ್ಕೆ ಮರಳಿದರು. ಆ ವೇಳೆಗೆ ಟ್ರೋಫಿಯೂ ವೇದಿಕೆಗೆ ಬಂದಿತ್ತು.

ತಾವು ಪ್ರದಾನ ಮಾಡದಿದ್ದರೆ ಬೇರೆಯಾರೂ ಮಾಡುವಂತಿಲ್ಲ ಎಂದು ನಕ್ವಿ ನಿರ್ಧರಿಸಿ ಬಂದಂತಿತ್ತು.

ತಮಗೆ ಸಲ್ಲಬೇಕಾದ ಟ್ರೋಫಿ (ಸಹ ಆಟಗಾರರ ಮತ್ತು ನೆರವು ಸಿಬ್ಬಂದಿ ಉಲ್ಲೇಖಿಸಿ) ಡ್ರೆಸಿಂಗ್‌ ರೂಮ್‌ನಲ್ಲಿದೆ ಎಂದು ಸೂರ್ಯಕುಮಾರ್ ಹೇಳಿದರು.

ಎಲ್ಲಿದೆ ಟ್ರೋಫಿ: ಭಾರತ ತಂಡ ತಮ್ಮಿಂದ ಟ್ರೋಫಿ ಸ್ವೀಕರಿಸಲು ಬರದ ಕಾರಣ ನಕ್ವಿ ಅವರು ಪೋಡಿಯಂನಿಂದ ಇಳಿದು ಹೊರನಡೆದರು. ಎಲ್ಲರಿಗೂ ಅಚ್ಚರಿ ಯಾಗುವ ರೀತಿ ಅವರ ಜೊತೆಗೆ ಕಾರ್ಯ ಕ್ರಮ ಆಯೋಜನಾ ಸಿಬ್ಬಂದಿಯೂ ‌ಟ್ರೋಫಿಯೊಂದಿಗೆ ಹೆಜ್ಜೆಹಾಕಿದರು. ಟ್ರೋಫಿಯು ಎಸಿಸಿ ಹೆಡ್‌ಕ್ವಾರ್ಟರ್ಸ್‌ ನಲ್ಲಿದೆ ಎಂದು ಹೇಳಲಾಗುತ್ತಿದೆ.

ಸಂಭಾವನೆ ದೇಣಿಗೆ ನೀಡುವೆ: ಸೂರ್ಯ

ದುಬೈ (ಪಿಟಿಐ): ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಆಡಿ ಪಡೆದ ಪೂರ್ಣ ಸಂಭಾವನೆಯನ್ನು ದೇಶದ ಸೇನಾಪಡೆ ಮತ್ತು ಪಹಲ್ಗಾಮ್‌ ದಾಳಿಯ ಸಂತ್ರಸ್ತರ ಕುಟುಂಬಕ್ಕೆ ನೀಡುವುದಾಗಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ಭಾನುವಾರ ರಾತ್ರಿ ನಡೆದ ತೀವ್ರ ಹೋರಾಟದ ಫೈನಲ್‌ನಲ್ಲಿ  ತನ್ನ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತ್ತು.

ಭಾರತದ ಆಟಗಾರರು ಟಿ20 ಮಾದರಿ ಪಂದ್ಯವೊಂದಕ್ಕೆ ತಲಾ ₹4 ಲಕ್ಷ ಪಡೆಯುತ್ತಾರೆ. ಇಲ್ಲಿ ಏಳು ಪಂದ್ಯ ಆಡಿರುವ ಸೂರ್ಯ ಒಟ್ಟು ₹28 ಲಕ್ಷ ಪಡೆದಿದ್ದು, ಅದನ್ನು ದೇಣಿಗೆಯಾಗಿ ನೀಡಲಿದ್ದಾರೆ.

₹21 ಕೋಟಿ ಬಹುಮಾನ ಪ್ರಕಟ

ಮುಂಬೈ (ಪಿಟಿಐ): ಯುಎಇ ಯಲ್ಲಿ ಅಜೇಯ ಸಾಧನೆಯೊಡನೆ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಗೆದ್ದ ಭಾರತ ತಂಡ ಮತ್ತು ನೆರವು ಸಿಬ್ಬಂದಿಗೆ ₹21 ಕೋಟಿ ಬಹುಮಾನ ನೀಡುವುದಾಗಿ ಬಿಸಿಸಿಐ ಘೋಷಿಸಿದೆ.

ಕ್ರಿಕೆಟ್‌ಗೆ ಸೂರ್ಯ ಅಗೌರವ: ಆಘಾ

ಸೂರ್ಯಕುಮಾರ್ ಯಾದವ್ ಅವರನ್ನು ಟೀಕಿಸಿರುವ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರು, ಭಾರತ ತಂಡದ ನಾಯಕನ ವರ್ತನೆ ಆಟಕ್ಕೆ ಅಗೌರವ ತಂದಿದೆ ಎಂದಿದ್ದಾರೆ.

‘ನಾನು ಕಟು ಪದಗಳನ್ನು ಬಳಸುವುದಿಲ್ಲ. ಆದರೆ ಅವರು ಅಗೌರವ ತರುವ ರೀತಿ ನಡೆದುಕೊಂಡಿದ್ದಾರೆ’ ಎಂದು ಭಾನುವಾರ ರಾತ್ರಿ ಮಾಧ್ಯಮ ಸಂವಾದದಲ್ಲಿ ದೂರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.