ಬೆಂಗಳೂರು: ಹದಿನಾಲ್ಕು ವರ್ಷದ ವೈಭವ್ ಸಂಜೀವ್ ಸೂರ್ಯವಂಶಿ ಜೈಪುರದ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ‘ನಕ್ಷತ್ರ’ದಂತೆ ಫಳ ಫಳ ಹೊಳೆದರು. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಆಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ ಈ ‘ಬಾಲಪ್ರತಿಭೆ’ ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ಗೆತ್ತಿದರು. ಐಪಿಎಲ್ ಪದಾರ್ಪಣೆ ಮಾಡಿದ ಅತಿ ಕಿರಿಯ ವಯಸ್ಸಿನ ಕ್ರಿಕೆಟಿಗ ವೈಭವ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ‘ಪೋಸ್ಟರ್ ಬಾಯ್’ ಆಗಿಬಿಟ್ಟಿದ್ದಾರೆ. ಅದಕ್ಕೆ ಕಾರಣ ಅವರ ನಿರ್ಭೀತ ಬ್ಯಾಟಿಂಗ್.
ಅನುಭವಿ ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಹಾಕಿದ ಆ ಎಸೆತ ಕೆಟ್ಟದಾಗಿರಲಿಲ್ಲ. ಪರಿಣಾಮಕಾರಿ ಎಸೆತವೇ ಆಗಿತ್ತು. ಆದರೆ ವೈಭವ್ ಒಂಚೂರೂ ವಿಚಲಿತರಾಗಲಿಲ್ಲ. ಗುಡ್ಲೆಂಗ್ತ್ ಎಸೆತವನ್ನು ಕವರ್ ಫೀಲ್ಡರ್ ಮೇಲಿಂದ ಎತ್ತಿದ ರೀತಿ ವೈಭವೋಪೇತವಾಗಿಯೇ ಇತ್ತು. ಸ್ವತಃ ಶಾರ್ದೂಲ್, ಲಖನೌ ನಾಯಕ, ವಿಕೆಟ್ಕೀಪರ್ ರಿಷಭ್ ಪಂತ್ ಸೇರಿದಂತೆ ಎದುರಾಳಿ ಆಟಗಾರರೇ ಮೆಚ್ಚಿ ಚಪ್ಪಾಳೆ ತಟ್ಟಿದರು.
ವೈಭವ ಆಟ ಅಷ್ಟಕ್ಕೆ ಮುಗಿಯಲಿಲ್ಲ. ಆವೇಶ್ ಖಾನ್ ಹಾಕಿದ ಎರಡನೇ ಓವರ್ನ ಮೊದಲ ಎಸೆತವನ್ನೂ ಲಾಂಗ್ ಆನ್ಗೆ ಎತ್ತಿದ ಸ್ಟೈಲಿಷ್ ಬ್ಯಾಟರ್ ವೈಭವ್ ತಮಗೆ ಯಾರ ಭಯವೂ ಇಲ್ಲ ಎಂಬುದನ್ನು ತೋರಿಸಿಬಿಟ್ಟರು. ಆವೇಶ್ ಕೂಡ ಅಚ್ಚರಿಗೊಂಡರು. ಆದರೆ ಈ ಪಂದ್ಯದ ಕೊನೆಯ ಓವರ್ ನಲ್ಲಿ ಅಮೋಘ ಬೌಲಿಂಗ್ ಮಾಡಿ ಲಖನೌ ತಂಡಕ್ಕೆ ಕಾಣಿಕೆ ಕೊಟ್ಟಿದ್ದು ಗೆಲ್ಲಿಸಿದವರು ಆವೇಶ್ ಖಾನ್ ಅವರೇ. ಎಂಟನೇ ಓವರ್ನಲ್ಲಿ ಸ್ಪಿನ್ನರ್ ದಿಗ್ವೇಶ್ ರಾಠಿ ಎಸೆತಕ್ಕೂ ಸಿಕ್ಸರ್ಗೆ ದಾರಿ ತೋರಿಸಿದರು.
ಅರ್ಧಶತಕದತ್ತ ವೇಗವಾಗಿ ಸಾಗುತ್ತಿದ್ದ ವೈಭವ್ 20 ಎಸೆತಗಳಲ್ಲಿ 34 ರನ್ ಗಳಿಸಿದ ಸಂದರ್ಭದಲ್ಲಿ ಮರ್ಕರಂ ಎಸೆತವನ್ನು ಹೊಡೆಯುವ ಯತ್ನದಲ್ಲಿ ಎಡವಿದರು. ವಿಕೆಟ್ಕೀಪರ್ ರಿಷಭ್ ಪಂತ್ ಸ್ಟಂಪಿಂಗ್ ಮಾಡಿದಾಗ ವೈಭವ್ ಇನಿಂಗ್ಸ್ಗೆ ತೆರೆಬಿತ್ತು.
ಪೆವಿಲಿಯನನ್ತ್ತ ಹೆಜ್ಜೆ ಹಾಕಿದ ವೈಭವ್ ಕಣ್ಣಂಚು ಹನಿಗೂಡಿದ್ದು ಹೊನಲು ಬೆಳಕಿನಲ್ಲಿ ಮಿಂಚಿತು. ಆ ಹನಿಗಳಲ್ಲಿ ಪದಾರ್ಪಣೆಯ ಸಂತಸ, ಉತ್ತಮ ಆರಂಭದ ತೃಪ್ತಿ ಮತ್ತು ಮೊದಲ ಅರ್ಧಶತಕ ಕೈತಪ್ಪಿದ ನಿರಾಶೆ ಮೇಳೈಸಿದ ಭಾವ ತುಳುಕಿತ್ತು.
ಪಂದ್ಯದ ನಂತರ ಮತ್ತೊಂದು ಅಪರೂಪದ ದೃಶ್ಯ ಟಿವಿ ಪರದೆ ಮೇಲೆ ರಾರಾಜಿಸಿತು. ಈ ಪಂದ್ಯದಲ್ಲಿ ಜಯ ಗಳಿಸಿದ ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕರಾದ ಸಂಜೀವ್ ಗೊಯೆಂಕಾ ಅವರು ವೈಭವ್ ಸೂರ್ಯವಂಶಿಯನ್ನು ಅಭಿನಂದಿಸಿದ ದೃಶ್ಯ ಅದು. ತಮ್ಮ ತಂಡ ಗೆದ್ದಿದ್ದಕ್ಕಿಂತಲೂ ವೈಭವ ಆಟ ಅವರಿಗೆ ಹೆಚ್ಚು ಸಂತಸ ತಂದಿರಬಹುದು. ಅದು ಅವರ ಹಾವಭಾವಗಳಲ್ಲಿ ವ್ಯಕ್ತವಾಗುತ್ತಿತ್ತು.
ವೈಭವ್ ಈ ಹಂತಕ್ಕೆ ಬರಲು ಬಹಳಷ್ಟು ಶ್ರಮಪಟ್ಟಿದ್ದಾರೆ. ಅವರ ಭವಿಷ್ಯ ರೂಪಿಸಲು ತಂದೆ ಸಂಜೀವ್ ಸೂರ್ಯವಂಶಿ ಅವರ ತ್ಯಾಗ ಕೂಡ ದೊಡ್ಡದು.
ಸದಾ ವಿವಾದ, ಗೊಂದಲ ಮತ್ತು ಅವ್ಯವಸ್ಥೆಗಳಿಂದಲೇ ಸುದ್ದಿಯಾಗುವ ಬಿಹಾರದ ಕ್ರಿಕೆಟ್ ಆಡಳಿತದಲ್ಲಿ ಆಟಗಾರರು ಬೆಳೆಯುವುದು ಸುಲಭವಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಬೆಳೆದು ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ರಣಜಿ ಟ್ರೋಫಿ ಸೇರಿದಂತೆ ದೇಶಿ ಕ್ರಿಕೆಟ್ನಲ್ಲಿಯೂ ಬಿಹಾರ ತಂಡದ ಸಾಧನೆ ಹೇಳಿಕೊಳ್ಳುವಂತಿಲ್ಲ.
ಅಂತಹ ವ್ಯವಸ್ಥೆಯಲ್ಲಿ ವೈಭವ್ ಈ ಮಟ್ಟಕ್ಕೆ ಬೆಳೆಯಲು ತಂದೆ ಸಂಜೀವ್ ಅವರೇ ಕಾರಣ. ಎಂಟನೇ ವಯಸ್ಸಿಗೆ ಕ್ರಿಕೆಟ್ ಆಡಲು ಶುರು ಮಾಡಿದ ವೈಭವ್ ಪ್ರತಿಭೆಯನ್ನು ಗುರುತಿಸಿದವರೂ ಅವರೇ. ಎಸೆತದ ವೇಗ. ಓಘವನ್ನು ಗುರುತಿಸುವ ವೈಭವ್ ಅವರ ಚುರುಕಿನ ದೃಷ್ಟಿ, ಅದರ ಜೊತೆಗೆ ವೇಗವಾಗಿ ಚಲಿಸುತ್ತಿದ್ದ ಕೈಗಳು, ಬ್ಯಾಟ್ ಗ್ರಿಪ್ ಎಲ್ಲವೂ ವಿಶೇಷವೇ ಆಗಿದ್ದವು. ಸಂಜೀವ್ ತಡ ಮಾಡಲಿಲ್ಲ. ಸಮಸ್ತಿಪುರದಲ್ಲಿದ್ದ ಕೋಚ್ ಬ್ರಜೇಶ್ ಝಾ ಅವರ ಅಕಾಡೆಮಿಗೆ ಸೇರಿಸಿದರು. ಅದರ ಪಾಟ್ನಾದ ಮನೀಷ್ ಝಾ ಅವರ ಅಕಾಡೆಮಿಗೆ ಸೇರಿಸಲಾಯಿತು. ಅದು ವೈಭವ್ ಜೀವನಕ್ಕೆ ಸಿಕ್ಕ ಮಹತ್ವದ ತಿರುವು.
‘ಹಾಲುಗಲ್ಲದ ಮುದ್ದುಮುದ್ದಾಗಿದ್ದ ವೈಭವ್ ಅವರಿಗೆ ಆಟವಷ್ಟೇ ಅಲ್ಲ. ಆಹಾರ, ವಿಹಾರಗಳ ತರಬೇತಿ ಕೂಡ ನೀಡಲಾಗಿದೆ. ಮಟನ್ ಖಾದ್ಯ, ಪಿಜ್ಜಾ ತಿನ್ನುವುದರಿಂದ ದೂರ ಉಳಿಸಲಾಗಿದೆ. ಪ್ರೊಟೀನ್, ಕ್ಯಾಲ್ಸಿಯಂ ಮತ್ತಿತರ ಪೌಷ್ಟಿಕಾಂಶಗಳ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದು ಮನೀಷ್ ಝಾ ಹೇಳಿದ್ದಾರೆ.
ವೈಭವ್ 10ನೇ ವಯಸ್ಸಿನವರಾಗಿದ್ದ ಸಂದರ್ಭದಲ್ಲಿ ಕ್ರಿಕೆಟ್ ತರಬೇತಿಯ ಖರ್ಚು ನಿಭಾಯಿಸುವುದು ತಂದೆಗೆ ಕಷ್ಟವಾಗಿತ್ತು. ತಮ್ಮ ಹಳ್ಳಿಯಲ್ಲಿದ್ದ ಕೃಷಿ ಭೂಮಿಯನ್ನು ಹಿಂದೆಮುಂದೆ ಯೋಚಿಸದೇ ಮಾರಿಬಿಟ್ಟರು. ಅದರಿಂದ ಬಂದ ದುಡ್ಡನ್ನು ಮಗನ ಕ್ರಿಕೆಟ್ ಕಲಿಕೆಗೆ ಹಾಕಿದರು.
ಬಾಲ್ಯದಿಂದಲೂ ಕ್ರಿಕೆಟ್ಪ್ರೇಮಿಯಾಗಿದ್ದ ಸಂಜೀವ್ ಬಡತನದ ಕಾರಣಕ್ಕೆ ಆಟಗಾರನಾಗಿ ಬೆಳೆಯಲಿಲ್ಲ. ತಮ್ಮ ಕನಸನ್ನು ಮಗ ಈಡೇರಿಸುವ ಭರವಸೆಯೊಂದಿಗೆ ಬಹಳಷ್ಟು ಕಷ್ಟ ಅನುಭವಿಸಿದರು. ರೆಸ್ಟೊರೆಂಟ್ ಸೇರಿದಂತೆ ಹಲವೆಡೆ ಕೆಲಸ ಮಾಡಿ ಕುಟುಂಬವನ್ನು ಸಲಹಿದರು.
ಅಪ್ಪನ ಶ್ರಮ ವ್ಯರ್ಥವಾಗಲು ಮಗ ಬಿಡಲಿಲ್ಲ. 13 ವರ್ಷವಾದಾಗಲೇ ಬಿಹಾರ ರಾಜ್ಯ ತಂಡ, 19 ವರ್ಷದೊಳಗಿನವರ ತಂಡಗಳಲ್ಲಿ ಆಡಿದರು. ಅವರ ಬ್ಯಾಟಿಂಗ್ಗೆ ಆಯ್ಕೆದಾರರೂ ಮನಸೋತರು. ಅಷ್ಟೇ ಅಲ್ಲ; ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ದಿಗ್ಗಜ ಕ್ರಿಕೆಟಿಗ, ರಾಜಸ್ಥಾನ ರಾಯಲ್ಸ್ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನೂ ಸೆಳೆದ ಬಾಲಕನಿಗೆ ಬಂಪರ್ ಒಲಿಯಿತು. ₹ 30 ಲಕ್ಷ ಮೂಲಬೆಲೆ ಹೊಂದಿದ್ದ ವೈಭವ್ ಅವರನ್ನು ರಾಜಸ್ಥಾನ ತಂಡವು ₹ 1.1 ಕೋಟಿ ಕೊಟ್ಟು ಖರೀದಿಸಿತು.
ಅವರ ವಯಸ್ಸು ಕುರಿತ ವಿವಾದವೂ ನಡೆದುಹೋಯಿತು. ವೈಭವ್ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆಯು ಇದಕ್ಕೆ ಕಾರಣ.
‘ಎಂಟನೇ ವಯಸ್ಸಿಗೇ ಅವರ ಬೋನ್ ಟೆಸ್ಟ್ (ಎಲುಬು ಸಾಂದ್ರತೆ ಪರೀಕ್ಷೆ) ಆಗಿದೆ. ವಯಸ್ಸು ಸರಿಯಾಗಿದೆ. ಯಾವುದೇ ಮೋಸ ಮಾಡಿಲ್ಲ. ಎಲ್ಲ ದಾಖಲೆಗಳೂ ಇವೆ’ ಎಂದು ತಂದೆ ಸಂಜೀವ್ ಸ್ಪಷ್ಟಪಡಿಸಿದ್ದರು. ಅಲ್ಲಿಗೆ ವಿವಾದ ತಣ್ಣಗಾಗಿತ್ತು.
ಈಗ ವೈಭವ್ ಅವರ ಕ್ರಿಕೆಟ್ ಜೀವನದ ಪ್ರಮುಖ ಘಟ್ಟದ ಆರಂಭವಾಗಿದೆ. ತಮಗೆ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ. ಈಗಾಗಲೇ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಮಹೇಂದ್ರ ಧೋನಿ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ವೈಭವ್ಗೆ ಆ ಎಲ್ಲ ದಿಗ್ಗಜರ ಸಾಲಿನಲ್ಲಿ ನಿಲ್ಲುವ ಪ್ರತಿಭೆ, ಸಮಯ ಮತ್ತು ಅವಕಾಶಗಳು ಖಂಡಿತವಾಗಿಯೂ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.