ಮುಂಬೈ: ಹತ್ತೊಂಬತ್ತು ವರ್ಷದೊಳಗಿನವರ ಏಷ್ಯಾ ಕಪ್ ಗೆದ್ದ ಭಾರತ ಯುವ ತಂಡದ ‘ಹೀರೊ’ ಅಥರ್ವ ಅಂಕೋಲೆಕರ್ ಅವರು ಮುಂಬೈ ತಂಡದಲ್ಲಿ ಸ್ಥಾನ ಗಳಿಸಿದ್ಧಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.
ಮಂಗಳವಾರ ಮುಂಬೈ ಕ್ರಿಕೆಟ್ ಸಂಸ್ಥೆಯು 17 ಆಟಗಾರರ ತಂಡವನ್ನು ಪ್ರಕಟಿಸಿದೆ. ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸುವರು. ಎಡಗೈ ಸ್ಪಿನ್ನರ್ ಅಥರ್ವ್ ಅವರು 19 ವರ್ಷದೊಳಗಿನವರ ಏಷ್ಯಾ ಕಪ್ ಫೈನಲ್ನಲ್ಲಿ ಐದು ವಿಕೆಟ್ ಗಳಿಸಿದ್ದರು. ತುರುಸಿನ ಪೈಪೋಟಿ ಕಂಡ ಪಂದ್ಯದಲ್ಲಿ ಅವರು ಗೆಲುವಿನ ರೂವಾರಿಯಾಗಿದ್ದರು.
ತಂಡ: ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಜೈ ಬಿಸ್ಟ್, ಆದಿತ್ಯ ತಾರೆ, ಸರ್ಫರಾಜ್ ಖಾನ್, ಶಿವಂ ದುಬೆ, ಶುಭಂ ರಾಂಜಣೆ, ಏಕನಾಥ್ ಕೆರ್ಕರ್, ಧವಳ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಶಮ್ಸ್ ಮುಲಾನಿ, ಅಥರ್ವ ಅಂಕೋಲೆಕರ್, ಶಾರ್ದೂಲ್ ಠಾಕೂರ್, ಸಿದ್ಧೇಶ್ ಲಾಡ್, ಯಶಸ್ವಿ ಜೈಸ್ವಾಲ್, ಕೃತಿಕಾ ಹನಗವಾಡಿ, ಶಶಾಂಕ್ ಅತ್ರಾಡಿ
ಶಿಖರ್, ಪಂತ್ ಕಣಕ್ಕೆ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ದೆಹಲಿ ತಂಡದಲ್ಲಿ ಅಂತರರಾಷ್ಟ್ರೀಯ ಆಟಗಾರರಾದ ಶಿಖರ್ ಧವನ್, ರಿಷಭ್ ಪಂತ್ ಮತ್ತು ನವದೀಪ್ ಸೈನಿ ಆಡುವರು ಎಂದು ದೆಹಲಿ ಡಿಸ್ಟ್ರಿಕ್ಟ್ಸ್ ಕ್ರಿಕೆಟ್ ಸಂಸ್ಥೆ (ಡಿಡಿಸಿಐ) ಅಧ್ಯಕ್ಷ ರಜತ್ ಶರ್ಮಾ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಶಿಖರ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದ್ದರಿಂದ ಅವರು ವಿಜಯ್ ಹಜಾರೆ ಟ್ರೋಫಿಯ ಕೆಲವು ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇದೆ. ಆದರೆ, ಪಂತ್ ಅವರು ಟೆಸ್ಟ್ ತಂಡದಲ್ಲಿದ್ದಾರೆ.
‘ತಮಗೆ ರಾಷ್ಟ್ರೀಯ ತಂಡದ ಕರ್ತವ್ಯದಿಂದ ಬಿಡುವು ಸಿಕ್ಕಾಗ ದೇಶಿ ಪಂದ್ಯಗಳಲ್ಲಿ ಈ ಶಿಖರ್, ಪಂತ್ ಮತ್ತು ನವದೀಪ್ ಸೈನಿ ಅವರು ಆಡುತ್ತಾರೆ. ಅವರಲ್ಲದೇ ವಿರಾಟ್ ಕೊಹ್ಲಿ ಮತ್ತು ಇಶಾಂತ್ ಶರ್ಮಾ ಕೂಡ ತಮ್ಮ ಬಿಡುವಿನಲ್ಲಿ ಬಂದು ಆಡಬಹುದು’ ಎಂದು ಶರ್ಮಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.