ಅಹಮದಾಬಾದ್: ಆರ್.ಸಮರ್ಥ್ ಹಾಗೂ ಶ್ರೇಯಸ್ ಗೋಪಾಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಮತ್ತು ವಿದ್ವತ್ ಕಾವೇರಪ್ಪ ತೋರಿದ ಅಮೋಘ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಮಯಂಕ್ ಅಗರವಾಲ್ ಬಳಗ ನಾಲ್ಕು ವಿಕೆಟ್ಗಳಿಂದ ಪಂಜಾಬ್ ತಂಡವನ್ನು ಮಣಿಸಿತು. ಬುಧವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಕರ್ನಾಟಕ ತಂಡ, ಸೌರಾಷ್ಟ್ರದ ಸವಾಲು ಎದುರಿಸಲಿದೆ.
ಮೊದಲು ಬ್ಯಾಟ್ ಮಾಡಿದ ಪಂಜಾಬ್ 50 ಓವರ್ಗಳಲ್ಲಿ 235 ರನ್ಗಳಿಗೆ ಆಲೌಟಾಯಿತು. 40 ರನ್ಗಳಿಗೆ 4 ವಿಕೆಟ್ ಪಡೆದ ವಿದ್ವತ್ ಅವರು ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂಜಾಬ್ನ ಯುವ ಆಟಗಾರ ಅಭಿಷೇಕ್ ಶರ್ಮ (109 ರನ್, 123 ಎ.) ಶತಕ ಗಳಿಸಿ ಗಮನ ಸೆಳೆದರು.
ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಮಯಂಕ್ (1) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಆರ್.ಸಮರ್ಥ್ (71 ರನ್, 106 ಎ.), ನಿಕಿನ್ ಜೋಸ್ (29 ರನ್, 35 ಎ.) ಮತ್ತು ಮನೀಷ್ ಪಾಂಡೆ (35 ರನ್, 46 ಎ.) ಆಸರೆಯಾದರು. ಕರ್ನಾಟಕ 42ನೇ ಓವರ್ನಲ್ಲಿ 5 ವಿಕೆಟ್ಗೆ 188 ರನ್ ಗಳಿಸಿ ಅಲ್ಪ ಒತ್ತಡಕ್ಕೆ ಸಿಲುಕಿತ್ತು.
ಈ ವೇಳೆ ಜವಾಬ್ದಾರಿಯುತ ಆಟವಾಡಿದ ಶ್ರೇಯಸ್ ಗೋಪಾಲ್ (42 ರನ್, 52 ಎ.) ಮತ್ತು ಮನೋಜ್ ಭಾಂಡಗೆ (ಅಜೇಯ 25, 23 ಎ.) ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಸೆಮಿಗೆ ಸೌರಾಷ್ಟ್ರ, ಅಸ್ಸಾಂ: ಇತರ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಸೌರಷ್ಟ್ರ ತಂಡ 44 ರನ್ಗಳಿಂದ ತಮಿಳುನಾಡು ತಂಡವನ್ನು ಮಣಿಸಿದರೆ, ಅಸ್ಸಾಂ 7 ವಿಕೆಟ್ಗಳಿಂದ ಜಮ್ಮು ಮತ್ತು ಕಾಶ್ಮೀರ ವಿರುದ್ದ ಗೆದ್ದಿತು.
ಸಂಕ್ಷಿಪ್ತ ಸ್ಕೋರ್
ಪಂಜಾಬ್ 50 ಓವರ್ಗಳಲ್ಲಿ 235: (ಅಭಿಷೇಕ್ ಶರ್ಮ 109, ಅನ್ಮೋಲ್ ಮಲ್ಹೋತ್ರ 29, ಸನ್ವೀರ್ ಸಿಂಗ್ 39, ರಮಣದೀಪ್ ಸಿಂಗ್ 17, ವಿದ್ವತ್ ಕಾವೇರಪ್ಪ 40ಕ್ಕೆ 4, ವಿ.ಕೌಶಿಕ್ 25ಕ್ಕೆ 1, ರೋನಿತ್ ಮೋರೆ 48ಕ್ಕೆ 2, ಮನೋಜ್ ಭಾಂಡಗೆ 47ಕ್ಕೆ1, ಕೆ.ಗೌತಮ್ 47ಕ್ಕೆ 1)
ಕರ್ನಾಟಕ 49.2 ಓವರ್ಗಳಲ್ಲಿ 6 ವಿಕೆಟ್ಗೆ 238: (ಆರ್.ಸಮರ್ಥ್ 71, ನಿಕಿನ್ ಜೋಸ್ 29, ಮನೀಷ್ ಪಾಂಡೆ 35, ಶ್ರೇಯಸ್ ಗೋಪಾಲ್ 42, ಮನೋಜ್ ಭಾಂಡಗೆ ಔಟಾಗದೆ 25, ಸನ್ವೀರ್ ಸಿಂಗ್ 28ಕ್ಕೆ 2, ಸಿದ್ದಾರ್ಥ್ ಕೌಲ್ 56ಕ್ಕೆ 1)
ಫಲಿತಾಂಶ: ಕರ್ನಾಟಕಕ್ಕೆ 4 ವಿಕೆಟ್ ಗೆಲುವು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.