
ಬೆಂಗಳೂರು: ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ವೇಗಿ ಪ್ರಸಿದ್ಧ ಎಂ ಕೃಷ್ಣ ಅವರು ಅಹಮದಾಬಾದಿನಲ್ಲಿ ಇದೇ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಯ್ಕೆ ಸಮಿತಿಯು ಬುಧವಾರ ಪ್ರಕಟಿಸಿರುವ 16 ಆಟಗಾರರ ತಂಡದಲ್ಲಿ ಇಬ್ಬರೂ ಇದ್ದಾರೆ. ಅವರು ಈಚೆಗೆ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಭಾರತ ತಂಡದಲ್ಲಿ ಆಡಿದ್ದರು. ಅಂತರರಾಷ್ಟ್ರೀಯ ಪಂದ್ಯಗಳು ಇಲ್ಲದ ಸಂದರ್ಭದಲ್ಲಿ ದೇಶಿ ಟೂರ್ನಿಗಳಲ್ಲಿ ಆಡುವುದನ್ನು ಭಾರತ ತಂಡದ ಆಟಗಾರರಿಗೆ ಬಿಸಿಸಿಐ ಕಡ್ಡಾಯಗೊಳಿಸಿದೆ. ಅದರಿಂದಾಗಿ ರಾಹುಲ್ ಮತ್ತು ಪ್ರಸಿದ್ಧ ಅವರು ದೇಶಿ ಏಕದಿನ ಟೂರ್ನಿಯಲ್ಲಿ ಕೆಲವು ಪಂದ್ಯಗಳಿಗೆ ಲಭ್ಯರಾಗುವ ಸಾಧ್ಯತೆ ಇದೆ.
ಕರ್ನಾಟಕ ತಂಡವನ್ನು ಮಯಂಕ್ ಅಗರವಾಲ್ ಮುನ್ನಡೆಸುವರು. ಅನುಭವಿ ಆಟಗಾರ ಕರುಣ್ ನಾಯರ್ ಉಪನಾಯಕರಾಗಿದ್ದಾರೆ. ಇಬ್ಬರು ವಿಕೆಟ್ಕೀಪರ್ಗಳಾದ ಕೆ.ಎಲ್. ಶ್ರೀಜಿತ್ ಮತ್ತು ಬಿ.ಆರ್. ಶರತ್ ಅವರಿಗೂ ಸ್ಥಾನ ನೀಡಲಾಗಿದೆ.
ಈಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವು ವೈಫಲ್ಯ ಅನುಭವಿಸಿತ್ತು.
ತಂಡ: ಮಯಂಕ್ ಅಗರವಾಲ್ (ನಾಯಕ), ಕರುಣ್ ನಾಯರ್ (ಉಪನಾಯಕ), ದೇವದತ್ತ ಪಡಿಕ್ಕಲ್, ಆರ್. ಸ್ಮರಣ್, ಕೆ.ಎಲ್. ಶ್ರೀಜಿತ್ (ವಿಕೆಟ್ಕೀಪರ್), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವೈಶಾಖ ವಿಜಯಕುಮಾರ್, ಎಲ್. ಮನ್ವಂತ್ ಕುಮಾರ್, ಶ್ರೀಶಾ ಎಸ್ ಆಚಾರ್, ಅಭಿಲಾಶ್ ಶೆಟ್ಟಿ, ಬಿ.ಆರ್. ಶರತ್ (ವಿಕೆಟ್ಕೀಪರ್), ಹರ್ಷಿಲ್ ಧಮಾನಿ, ಧ್ರುವ ಪ್ರಭಾಕರ್, ಕೆ.ಎಲ್.ರಾಹುಲ್, ಪ್ರಸಿದ್ಧ ಎಂ ಕೃಷ್ಣ. ಕೆ. ಯರೇಗೌಡ (ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶಬರೀಶ್ ಮೋಹನ್ (ಫೀಲ್ಡಿಂಗ್ ಕೋಚ್), ಪಿ.ವಿ. ಸುಮಂತ್ (ಮ್ಯಾನೇಜರ್), ಇರ್ಫಾನುಲ್ಲಾ ಖಾನ್ (ಸ್ಟ್ರೆಂಥ್–ಕಂಡಿಷನಿಂಗ್ ಕೋಚ್), ಅಭಿಷೇಕ್ ಕುಲಕರ್ಣಿ (ಫಿಸಿಯೊಥೆರಪಿಸ್ಟ್), ಗಿರಿಪ್ರಸಾದ್ (ಪರ್ಫಾರ್ಮೆನ್ಸ್ ಅನಾಲಿಸ್ಟ್), ಸಿ.ಎಂ. ಸೋಮಸುಂದರ್ (ಮಸಾಜ್ ತಜ್ಞ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.