ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಪಂದ್ಯಗಳ ಫಲಿತಾಂಶಗಳಿಂದ ಭಾವುಕರಾಗುತ್ತಿರಲಿಲ್ಲ. ಇದೂ ಅವರ ಯಶಸ್ಸಿಗೆ ಪ್ರಮುಖ ಕಾರಣ ಎಂದು ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಹೇಳಿದ್ದಾರೆ.
‘ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಳ್ಳುವುದು ಬಹುಶಃ ಯಾರಿಗೇ ಆದರೂ ಕಠಿಣ ಸವಾಲು ಎಂಬುದು ನನ್ನ ಭಾವನೆ. ಏಕೆಂದರೆ ಪ್ರಪಂಚದಾದ್ಯಂತ ಪ್ರತಿಯೊಬ್ಬರಿಂದಲೂ ತಂಡದ ಮೇಲೆ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಆದರೆ, ಧೋನಿ ಅವರು ಯಾವಾಗಲೂ ಫಲಿತಾಂಶಗಳಿಂದ ಭಾವನಾತ್ಮಕವಾಗಿ ದೂರ ಉಳಿಯುತ್ತಿದ್ದರು’ ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಕಾರ್ಯಕ್ರಮವೊಂದರಲ್ಲಿಲಕ್ಷ್ಮಣ್ ಹೇಳಿದ್ದಾರೆ.
ಇದನ್ನೂ ಓದಿ:ಅಂತರರಾಷ್ಟ್ರೀಯ ಕ್ರಿಕೆಟ್ಗೆ ಧೋನಿ, ರೈನಾ ವಿದಾಯ
‘ಹೇಗೆ ವರ್ತಿಸಬೇಕು, ನಮ್ಮ ದೇಶದ ರಾಯಭಾರಿಗಳಾಗುವುದು ಹೇಗೆ? ಸಾರ್ವಜನಿಕವಾಗಿ ನಮ್ಮನ್ನು ನಾವು ಹೇಗೆ ಪ್ರಚುರಪಡಿಸಬೇಕು ಎಂಬ ವಿಚಾರದಲ್ಲಿ ಧೋನಿ ಅವರು ಕ್ರೀಡಾ ಅಭಿಮಾನಿಗಳನ್ನು ಮಾತ್ರವಲ್ಲದೆ ಲಕ್ಷಾಂತರ ಭಾರತೀಯರನ್ನು ಪ್ರೇರೇಪಿಸಿದ್ದಾರೆ. ಅದಕ್ಕಾಗಿಯೇ ಅವರು ತುಂಬಾ ಗೌರವಕ್ಕೆ ಪಾತ್ರರಾಗಿದ್ದಾರೆ’ ಎಂದು ಲಕ್ಷ್ಮಣ್ ಹೇಳಿದ್ದಾರೆ.
ಧೋನಿ ಅವರು ಆಗಸ್ಟ್ 15ರಂದು ಸಂಜೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ತಂಡವು 2007ರ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. 2014ರಲ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.
ಇದನ್ನೂ ಓದಿ:ಮಹೇಂದ್ರಸಿಂಗ್ ಧೋನಿ ಬರೆದ ದಾಖಲೆಗಳ ಪಟ್ಟಿ ಇದು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.