ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಅಪಾರ ನಷ್ಟ ಅನುಭವಿಸುತ್ತಿದ್ದರೂ, ಅದರಿಂದ ಹೊರಬರುವ ಸಲುವಾಗಿ ತಾವುಯಾವುದೇ ರೀತಿಯಲ್ಲೂ ಭಾರತವನ್ನು ಅವಲಂಬಿಸಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಎಹ್ಸಾನ್ ಮಾನಿ ಹೇಳಿಕೆ ನೀಡಿದ್ದಾರೆ.
2008ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಪಾಕ್ ವಿರುದ್ಧ ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದನ್ನು ಭಾರತ ನಿಲ್ಲಿಸಿದೆ. ಹಾಗಾಗಿ, ಈ ಎರಡೂ ತಂಡಗಳು ಐಸಿಸಿಟೂರ್ನಿಮತ್ತು ಏಷ್ಯಾಕಪ್ನಲ್ಲಿ ಮಾತ್ರವೇ ಮುಖಾಮುಖಿಯಾಗುತ್ತಿವೆ.
‘ನಾವು ನಷ್ಟದಲ್ಲಿದ್ದೇವೆ. ಆದರೆ, ಅವರು (ಭಾರತ) ನಮ್ಮ ಆಲೋಚನೆ ಅಥವಾ ಯೋಜನೆಗಳಲ್ಲಿ ಇಲ್ಲ. ನಾವು ಅವರಿಲ್ಲದೆ ಬದುಕಬೇಕು. ನಾವು ಬದುಕಲು ಅವರ ಅಗತ್ಯವಿಲ್ಲ’ ಎಂದು ಮಾನಿ ಹೇಳಿರುವುದಾಗಿ ಪಿಸಿಬಿ ಪ್ರಕಟಿಸಿದೆ.
ಐಸಿಸಿಯ ಮಾಜಿ ಅಧ್ಯಕ್ಷರೂ ಆಗಿರುವ ಅವರು, ‘ಭಾರತವು ನಮ್ಮೆದುರು ಆಡುವುದಿಲ್ಲ ಎಂದಾದರೆ, ನಾವು ಅವರನ್ನು ಬಿಟ್ಟು ಯೋಜನೆಗಳನ್ನು ರೂಪಿಸಬೇಕು ಎಂಬುದು ಸ್ಪಷ್ಟವಾಗಿದೆ. ಒಂದೆರಡು ಸಲ ಅವರು ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಕೊನೇ ಕ್ಷಣದಲ್ಲಿ ಹಿಂದೆ ಸರಿದಿದ್ದರು’ ಎಂದಿದ್ದಾರೆ. ಮುಂದುವರಿದು ‘ಭವಿಷ್ಯದಲ್ಲಿ ಭಾರತ–ಪಾಕಿಸ್ತಾನ ದ್ವಿಪಕ್ಷೀಯ ಸರಣಿಯಲ್ಲಿ ಆಡುವುದು ಅನುಮಾನ’ ಎಂದೂ ತಿಳಿಸಿದ್ದಾರೆ.
‘ಸದ್ಯ ನಾವು ಭಾರತದೆದುರು ಐಸಿಸಿ ಟೂರ್ನಿಗಳು ಹಾಗೂ ಏಷ್ಯಾಕಪ್ನಲ್ಲಿ ಮಾತ್ರವೇಆಡುತ್ತಿದ್ದೇವೆ. ಏಕೆಂದರೆ ನಾವು ಕ್ರಿಕೆಟ್ನಲ್ಲಿ ಆಸಕ್ತಿ ಹೊಂದಿದ್ದೇವೆ. ಕ್ರಿಕೆಟ್ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿಯೇ ಇಡಲು ಬಯಸುತ್ತೇವೆ’ ಎಂದಿದ್ದಾರೆ.
ಕೋವಿಡ್–19 ನಿಂದಾಗಿ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿರ್ಬಂಧ ಹೇರಿರುವುದರಿಂದ ಪಿಸಿಬಿಗೆ ಅಪಾರ ನಷ್ಟ ಉಂಟಾಗಿದೆ. ಆದಾಗ್ಯೂ, ಆಟಗಾರರು, ಮತ್ತು ಪಿಸಿಬಿಗೆ ಸಂಬಂಧಿಸಿದ ಪ್ರತಿಯೊಬ್ಬರ ಹಿತಾಸಕ್ತಿಯನ್ನೂ ಕಾಪಾಡುವುದಾಗಿ ಮಾನಿ ಭರವಸೆ ನೀಡಿದ್ದಾರೆ.
ಪ್ರದರ್ಶನ ಆಧಾರಿತ ನಿರ್ಧಾರಗಳನ್ನು ಹೊರತುಪಡಿಸಿ, ಅಂತರರಾಷ್ಟ್ರೀಯ ಮತ್ತು ದೇಶೀಯ ಆಟಗಾರರಿಗೆ ಯಾವುದೇ ರೀತಿಯ ವೇತನ ಕಡಿತವಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.