ADVERTISEMENT

ಬಾಂಗ್ಲಾ ಹುಲಿಗಳು–ಸಿಂಹಳೀಯರ ಕದನಕ್ಕೆ ಮಳೆ ಅಡ್ಡಿ; ಪಂದ್ಯ ರದ್ದು

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 13:36 IST
Last Updated 11 ಜೂನ್ 2019, 13:36 IST
   

ಬ್ರಿಸ್ಟಲ್: ಬೆಳಗ್ಗಿನಿಂದಲೂ ಮಳೆ ಸುರಿಯುತ್ತಿರುವುದರಿಂದ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಅಡ್ಡಿಯಾಯಿತು. ಆಟಕ್ಕೆ ಸಹಕಾರಿಯಲ್ಲದ ವಾತಾವರಣದ ಕಾರಣದಿಂದ ಪಂದ್ಯ ರದ್ದು ಪಡಿಸಲಾಗಿದೆ.ಟಾಸ್‌ ಕೂಡಾ ನಡೆಸಲು ಸಾಧ್ಯವಾಗಿರಲಿಲ್ಲ.

ಪಂದ್ಯ ರದ್ದುಗೊಂಡಿರುವ ಕಾರಣ ಉಭಯ ತಂಡಗಳಿಗೆ ಒಂದೊಂದು ಪಾಯಿಂಟ್‌ ಹಂಚಿಕೆಯಾಗಿದೆ. ಪಾಯಿಂಟ್‌ ಪಟ್ಟಿಯಲ್ಲಿ ಶ್ರೀಲಂಕಾ ಮತ್ತು ವೆಸ್ಟ್‌ ಇಂಡೀಸ್‌ ಕ್ರಮವಾಗಿ 5 ಮತ್ತು 6ನೇ ಸ್ಥಾನ ಪಡೆದಿವೆ.

ಬಾಂಗ್ಲಾದೇಶ ತಂಡ ಸತತ ಎರಡು ಸೋಲಿನಿಂದ ಕಂಗಾಲಾಗಿದೆ.ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಹೀನಾಯ ಸೋಲನುಭವಿಸಿದ ಶ್ರೀಲಂಕಾ ನಂತರ ಪುಟಿದೆದ್ದಿದೆ. ಅಫ್ಗಾನಿಸ್ತಾನವನ್ನು ಮಣಿಸಿರುವ ದಿಮುತ್ ಕರುಣಾರತ್ನೆ ಬಳಗ, ತನ್ನ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ಎದುರು ಮಳೆಯ ಕಾರಣ ಒಂದು ಪಾಯಿಂಟ್‌ಗೆ ಸಮಾಧಾನಪಡಬೇಕಾಯಿತು.

ADVERTISEMENT

ಬಾಂಗ್ಲಾ ಹುಲಿಗಳು ಟೂರ್ನಿಯಲ್ಲಿ ಉತ್ತಮ ಆರಂಭವನ್ನೇನೊ ಮಾಡಿದ್ದರು. ದಕ್ಷಿಣ ಆಫ್ರಿಕಾವನ್ನು ಮಣಿಸಿದ ತಂಡ ಆ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಗರಿಷ್ಠ ಮೊತ್ತ (6ಕ್ಕೆ 330) ದಾಖಲಿಸಿ ಗಮನ ಸೆಳೆದಿತ್ತು.ಆದರೆ ನಂತರದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೋರಾಡಿದರೂ ಎರಡು ವಿಕೆಟ್‌ಗಳಿಂದ ಸೋಲನುಭವಿತು. ಆತಿಥೇಯ ಇಂಗ್ಲೆಂಡ್‌ ತಂಡವಂತೂ 106 ರನ್‌ಗಳಿಂದ ಸುಲಭವಾಗಿ ಬಾಂಗ್ಲಾ ವಿರುದ್ಧ ಜಯಗಳಿಸಿತ್ತು.

ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮಾತ್ರ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿದ್ದ ಅವರು ಇಂಗ್ಲೆಂಡ್ ವಿರುದ್ಧ ಶತಕ ದಾಖಲಿಸಿ ಮಿಂಚಿದ್ದರು. ಹೀಗಾಗಿ ಬ್ಯಾಟಿಂಗ್ ವಿಭಾಗದ ಜವಾಬ್ದಾರಿ ಅವರ ಹೆಗಲೇರಿದೆ. ಬೌಲಿಂಗ್ ವಿಭಾಗ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿಲ್ಲ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲರ್‌ಗಳು 386 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ಬೆರಳಿನ ಗಾಯದ ಸಮಸ್ಯೆಯಿಂದಾಗಿ ಶ್ರೀಲಂಕಾ ವೇಗದ ಬೌಲರ್‌ ನುವಾನ್‌ ಪ್ರದೀಪ್‌ ಅಲಭ್ಯ ಈ ಪಂದ್ಯದಿಂದ ಹೊರಗುಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.