ಬೆಂಗಳೂರು: ಸಿಐಎಲ್ ಎಫ್ಸಿ ತಂಡದ ಗೋಪಾಲ ಕೃಷ್ಣ, ಶುಕ್ರವಾರ ತಮ್ಮ ತಂಡದ ಪಾಲಿಗೆ ‘ವಿಲನ್’ ಆದರು. ಗೋಪಾಲ ಮಾಡಿದ ಎಡವಟ್ಟಿನಿಂದಾಗಿ ಸಿಐಎಲ್ ತಂಡ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ಎ) ಆಶ್ರಯದ ಸೂಪರ್ ಡಿವಿಷನ್ ಲೀಗ್ ಪಂದ್ಯದಲ್ಲಿ ನಿರಾಸೆ ಕಂಡಿತು.
ಅಶೋಕನಗರದಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಹೋರಾಟದಲ್ಲಿ ಎಂಇಜಿ ಆ್ಯಂಡ್ ಸೆಂಟರ್ ಎಫ್ಸಿ ತಂಡ 2–1 ಗೋಲುಗಳಿಂದ ಗೆದ್ದಿತು.
ಸಿಐಎಲ್ ತಂಡದ ಸುರೇನ್ 57ನೇ ನಿಮಿಷದಲ್ಲಿ ಗೋಲು ಬಾರಿಸಿ ಮಿಂಚಿದರು. ನಿಗದಿತ ಅವಧಿಯ (90 ನಿಮಿಷ) ಆಟ ಮುಗಿದಾಗ ಸಿಐಎಲ್ 1–0 ಗೋಲಿನಿಂದ ಮುಂದಿತ್ತು. ಆದರೆ ಹೆಚ್ಚುವರಿ ಅವಧಿಯಲ್ಲಿ ಎಂಇಜಿ ಆಟಗಾರರು ಮೋಡಿ ಮಾಡಿದರು. 90+2ನೇ ಸಿಐಎಲ್ ತಂಡದ ಗೋಪಾಲ, ಚೆಂಡನ್ನು ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಒದ್ದರು. ಹೀಗಾಗಿ ಎಂಇಜಿ ಖಾತೆಗೆ ‘ಉಡುಗೊರೆ’ ರೂಪದಲ್ಲಿ ಗೋಲು ಸೇರ್ಪಡೆಯಾಯಿತು.
90+4ನೇ ನಿಮಿಷದಲ್ಲಿ ರಾಹುಲ್, ಕಾಲ್ಚಳಕ ತೋರಿದ್ದರಿಂದ ಎಂಇಜಿ ಆಟಗಾರರು ಖುಷಿಯ ಕಡಲಲ್ಲಿ ತೇಲಿದರು.
‘ಎ’ ಡಿವಿಷನ್ ಲೀಗ್ನ ಪಂದ್ಯದಲ್ಲಿ ಇನ್ಕಮ್ ಟ್ಯಾಕ್ಸ್ ಎಫ್ಸಿ ತಂಡ 2–0 ಗೋಲುಗಳಿಂದ ಡಿವೈಇಎಸ್ ಎಫ್ಸಿ ವಿರುದ್ಧ ವಿಜಯಿಯಾಯಿತು.
ಇನ್ಕಮ್ ಟ್ಯಾಕ್ಸ್ ತಂಡದ ಸತೀಶ್ 62ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದರು. 77ನೇ ನಿಮಿಷದಲ್ಲಿ ಶಿವಕುಮಾರ್ ಗೋಲು ದಾಖಲಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.