ADVERTISEMENT

ISL: ಬಿಎಫ್‌ಸಿ–ನಾರ್ತ್‌ಈಸ್ಟ್‌ ಪಂದ್ಯ ಡ್ರಾ

ಇಂಡಿಯನ್‌ ಸೂಪರ್‌ ಲೀಗ್‌: ಉಭಯ ತಂಡಗಳಿಗೆ ತಲಾ 1 ಅಂಕ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 16:09 IST
Last Updated 22 ಫೆಬ್ರುವರಿ 2026, 16:09 IST
<div class="paragraphs"><p>ಬೆಂಗಳೂರು ಎಫ್‌ಸಿ (ನೀಲಿ ಜರ್ಸಿ) ಮತ್ತು ನಾರ್ತ್‌ಈಸ್ಟ್‌ ಯುನೈಟೆಡ್‌ ತಂಡದ ಆಟಗಾರರ ಸೆಣಸಾಟ –</p></div>

ಬೆಂಗಳೂರು ಎಫ್‌ಸಿ (ನೀಲಿ ಜರ್ಸಿ) ಮತ್ತು ನಾರ್ತ್‌ಈಸ್ಟ್‌ ಯುನೈಟೆಡ್‌ ತಂಡದ ಆಟಗಾರರ ಸೆಣಸಾಟ –

   

ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ.

ಬೆಂಗಳೂರು: ಆತಿಥೇಯ ಬೆಂಗಳೂರು ಎಫ್‌ಸಿ ತಂಡವು ಭಾನುವಾರ ನಡೆದ ಇಂಡಿಯನ್ ಸೂಪರ್ ಲೀಗ್‌ನ ರೋಚಕ ಪಂದ್ಯದಲ್ಲಿ 1–1 ಗೋಲುಗಳಿಂದ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಡ್ರಾ ಸಾಧಿಸಿತು. 

ADVERTISEMENT

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ ತಂಡವು 19ನೇ ನಿಮಿಷದಲ್ಲಿ ಬ್ರಿಯಾನ್ ಸ್ಯಾಂಚೆಜ್ ಗಳಿಸಿದ ಗೋಲಿನಿಂದಾಗಿ ಮುನ್ನಡೆ ಸಾಧಿಸಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ಲಾಲ್‌ರಿಂಜುವಾಲಾ ಲಾಲ್‌ಬಿಯಾಕ್ನಿಯಾ (68ನೇ ನಿಮಿಷ) ಗೋಲು ದಾಖಲಿಸುವ ಮೂಲಕ ನಾರ್ತ್‌ಈಸ್ಟ್ ತಂಡಕ್ಕೆ ಸಮಬಲ ತಂದುಕೊಟ್ಟರು.

ಬಿಎಫ್‌ಸಿ ತಂಡವು ಹೋದ ವಾರ ಸ್ಪೋರ್ಟಿಂಗ್‌ ಡೆಲ್ಲಿ ತಂಡವನ್ನು 2–0ಯಿಂದ ಮಣಿಸಿ ಅಭಿಯಾನ ಆರಂಭಿಸಿತ್ತು. ಆಡಿರುವ ಎರಡು ಪಂದ್ಯಗಳಲ್ಲಿ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹೈಲ್ಯಾಂಡರ್ಸ್‌ ತಂಡವು ಎರಡು ಪಂದ್ಯಗಳಲ್ಲಿ ಒಂದು ಅಂಕ ಗಳಿಸಿದ್ದು, ಎಂಟನೇ ಸ್ಥಾನದಲ್ಲಿದೆ.

ಅನುಭವಿ ರಾಹುಲ್ ಭೇಕೆ ಅವರು ಆಡುವ ಬಳಗದಲ್ಲಿ ಅಲಭ್ಯರಾಗಿದ್ದರಿಂದ ತಂಡದ ನಾಯಕತ್ವ ಗುರುಪ್ರೀತ್ ಸಿಂಗ್ ಸಂಧು ಹೆಗಲ ಮೇಲೆ ಬಿದ್ದಿತು. ಪಂದ್ಯದ ಆರಂಭಿಕ ನಿಮಿಷಗಳಲ್ಲೇ ನಿರ್ಣಾಯಕ ‘ಸೇವ್’ ಮಾಡುವ ಮೂಲಕ ಹಿರಿಯ ಗೋಲ್‌ಕೀಪರ್ ಸಂಧು ಅವರು ನಾರ್ತ್‌ಈಸ್ಟ್ ತಂಡದ ಗೋಲು ಪ್ರಯತ್ನವನ್ನು ತಡೆದರು.

19ನೇ ನಿಮಿಷದಲ್ಲಿ ಬ್ರಿಯಾನ್‌ ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದರು. ಮೈದಾನದ ಮಧ್ಯಭಾಗದಿಂದ ಅದ್ಭುತವಾಗಿ ಚೆಂಡನ್ನು ಕೊಂಡೊಯ್ದ ಅವರು, ಗೋಲ್‌ಕೀಪರ್‌ನ ಎಡಭಾಗದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ತಲುಪಿಸಿದರು. ರಯಾನ್ ವಿಲಿಯಮ್ಸ್ ಮೊದಲಾರ್ಧದ ಅಂತ್ಯದಲ್ಲಿ ಉತ್ತಮ ಕೌಶಲಯ ಪ್ರದರ್ಶಿಸಿದರೂ ಬಿಎಫ್‌ಸಿಯ ಮುನ್ನಡೆಯನ್ನು ದ್ವಿಗುಣಗೊಳಿಸಲು ಸಾಧ್ಯವಾಗಲಿಲ್ಲ.

ದ್ವಿತೀಯಾರ್ಧದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಸಮಬಲಕ್ಕಾಗಿ ತೀವ್ರ ಹೋರಾಟ ನಡೆಸಿತು. 60ನೇ ನಿಮಿಷದಲ್ಲಿ ನಾರ್ತ್‌ ಈಸ್ಟ್‌ ಆಟಗಾರರು ಹೆಡರ್ ಮೂಲಕ ಗೋಲು ಮಾಡಲು ಯತ್ನಿಸಿದರೂ, ಸಂಧು ಮತ್ತೊಮ್ಮೆ ಅದ್ಭುತ ‘ರಿಫ್ಲೆಕ್ಸ್ ಸೇವ್’ ಮೂಲಕ ತಡೆದರು. ಆದರೆ, ನಾರ್ತ್‌ಈಸ್ಟ್ ತಂಡದ ದಾಳಿಯನ್ನು ಹೆಚ್ಚು ಹೊತ್ತು ತಡೆಯಲು ಸಾಧ್ಯವಾಗಲಿಲ್ಲ. 68ನೇ ನಿಮಿಷದಲ್ಲಿ ಲಾಲ್‌ರಿಂಜುವಾಲಾ ಗೋಲು ಗಳಿಸುವ ಮೂಲಕ ಪಂದ್ಯವನ್ನು 1-1ರಿಂದ ಸಮಬಲಕ್ಕೆ ತಂದರು.

ಪಂದ್ಯ ಮುಕ್ತಾಯದ ಹಂತ ತಲುಪುತ್ತಿದ್ದಂತೆ ಉಭಯ ತಂಡಗಳು ಗೆಲುವಿಗಾಗಿ ತೀವ್ರ ಹೋರಾಟ ನಡೆಸಿದವು. ಆದರೆ, ಯಾವುದೇ ತಂಡಕ್ಕೆ ನಿರ್ಣಾಯಕ ಗೋಲು ಲಭಿಸಲಿಲ್ಲ.

ಬೆಂಗಳೂರು ಎಫ್‌ಸಿ ತಂಡವು ಇದೇ 27ರಂದು ಕಂಠೀರವ ಕ್ರೀಡಾಂಗಣದಲ್ಲಿ ಪಂಜಾಬ್‌ ಎಫ್‌ಸಿ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.