ಅಶ್ಗಬತ್, ತುರ್ಕಮೇನಿಸ್ತಾನ್: ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡವು ಎಎಫ್ಸಿ ಕಪ್ ಅಂತರ ವಲಯ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ.
ಇಲ್ಲಿನ ಕೊಪೆಟ್ದಾಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಿಎಫ್ಸಿ, 0–2ರಿಂದ ಸ್ಥಳೀಯ ಅಲ್ಟಿನ್ ಅಸೈರ್ ತಂಡದ ಎದುರು ಸೋತಿದೆ. ಇದರೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ.
ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ನಡುವಣ ಜಿದ್ದಾಜಿದ್ದಿನ ಹೋರಾಟ ಕಂಡುಬಂತು. ಗೋಲು ಗಳಿಸಲು ಎರಡೂ ತಂಡಗಳು ಅನೇಕ ಬಾರಿ ಪ್ರಯತ್ನಿಸಿದವು. ಆದರೆ, ಈ ತಂಡಗಳ ರಕ್ಷಣಾ ಪಡೆಯ ಆಟಗಾರರು ಅದಕ್ಕೆ ಅವಕಾಶ ನೀಡಲಿಲ್ಲ.
ದ್ವಿತೀಯಾರ್ಧದಲ್ಲಿ ಅಲ್ಟಿನ್ ಅಸೈರ್ ತಂಡವು ಆಕ್ರಮಣಕಾರಿ ಆಟವಾಡಿತು. 50ನೇ ನಿಮಿಷದಲ್ಲಿ ಅಲ್ಟಿಮೈರಾತ್ ಅನ್ನಾದುರ್ದೇವ್ ಅವರು ಗೋಲು ದಾಖಲಿಸಿ ತಂಡಕ್ಕೆ 1–0ಯ ಮುನ್ನಡೆ ತಂದುಕೊಟ್ಟರು. ಇದಾಗಿ ಎಂಟು ನಿಮಿಷಗಳ ನಂತರ ಸ್ಥಳೀಯ ತಂಡವು ಎರಡನೇ ಗೋಲು ದಾಖಲಿಸಿತು.
58ನೇ ನಿಮಿಷದಲ್ಲಿ ಬಹಿತ್ ಒರಾಜ್ಸಖೆದೋವ್ ಅವರು ಚೆಂಡನ್ನು ಗುರಿ ಮುಟ್ಟಿಸಿ ತಂಡದ ಸಂಭ್ರಮ ಇಮ್ಮಡಿಗೊಳಿಸಿದರು. ನಂತರದ ಅವಧಿಯಲ್ಲಿ ಬಿಎಫ್ಸಿಯ ನಾಯಕ ಸುನಿಲ್ ಚೆಟ್ರಿ ಹಾಗೂ ಉದಾಂತ್ ಸಿಂಗ್ ಅವರು ಗೋಲು ದಾಖಲಿಸಲು ಹರಸಾಹಸಪಟ್ಟರು. ಆದರೆ, ಎದುರಾಳಿ ತಂಡದ ರಕ್ಷಣಾ ಪಡೆಯು ಅದಕ್ಕೆ ಅವಕಾಶ ನೀಡಲಿಲ್ಲ. ಎಚ್ಚರಿಕೆಯ ಆಟದ ಮೂಲಕ ಬಿಎಫ್ಸಿಯ ಮಂಚೂಣಿ ವಿಭಾಗದ ಆಟಗಾರರನ್ನು ಕಟ್ಟಿಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.