
ಬೆಂಗಳೂರು: ರಾಜು ಎಂ. ಅವರ (4ನೇ ನಿ., 17ನೇ ನಿ., 18ನೇ ನಿ. ಹಾಗೂ 40ನೇ ನಿ.) ಅವರ ನಾಲ್ಕು ಗೋಲುಗಳ ನೆರವಿನಿಂದ ಭುವನೇಶ್ವರದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಕೆಐಎಸ್ಎಸ್) ಶಾಲಾ ತಂಡವು ಗುರುವಾರ ಆರಂಭಗೊಂಡ 13ನೇ ಆವೃತ್ತಿಯ ಪರಿಕ್ರಮ ಚಾಂಪಿಯನ್ಸ್ ಲೀಗ್ (ಪಿಸಿಎಲ್) ಫುಟ್ಬಾಲ್ ಟೂರ್ನಿಯಲ್ಲಿ 4–0ಯಿಂದ ಕ್ಯಥೆಡ್ರಲ್ ಪ್ರೌಢಶಾಲಾ ತಂಡವನ್ನು ಮಣಿಸಿತು.
16 ವರ್ಷದೊಳಗಿನ ಅಂತರ ಶಾಲಾ ಲೀಗ್ ಇದಾಗಿದ್ದು, ಡಿವೈಇಎಸ್ ಆಯುಕ್ತ ಆರ್.ಚೇತನ್ ಅವರು ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಟೂರ್ನಿಗೆ ಚಾಲನೆ ನೀಡಿದರು.
ಪರಿಕ್ರಮ ಹ್ಯುಮಾನಿಟಿ ಫೌಂಡೇಷನ್ನ ಆಶ್ರಯದಲ್ಲಿ ಈ ಟೂರ್ನಿ ಆಯೋಜನೆಗೊಂಡಿದೆ. ಬೆಂಗಳೂರಿನ 13 ಶಾಲೆಗಳು ಸೇರಿ ಗೋವಾ, ಉದಯಪುರ ಹಾಗೂ ಒಡಿಶಾದ ಒಟ್ಟು 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ.
ಫಲಿತಾಂಶಗಳು: ಲಯೊಲಾ ಪ್ರೌಢಶಾಲಾ ತಂಡ (ಗೋವಾ) 1–0ಯಿಂದ ದೆಹಲಿ ಪಬ್ಲಿಕ್ ಶಾಲೆ (ಪೂರ್ವ) ವಿರುದ್ಧ; ಕೆಐಎಸ್ಎಸ್ ಶಾಲಾ ತಂಡ 4–0ಯಿಂದ ಕ್ಯಾಥೆಡ್ರಲ್ ಹೈಸ್ಕೂಲ್ ವಿರುದ್ಧ; ಹೆಡ್ಸ್ಟಾರ್ಟ್ ಶಿಕ್ಷಣ ಸಂಸ್ಥೆ ತಂಡ 2–0ಯಿಂದ ಲೆಗಸಿ ಶಾಲೆ ವಿರುದ್ಧ; ದೆಹಲಿ ಪಬ್ಲಿಕ್ ಶಾಲೆ (ಉತ್ತರ) 3–0ಯಿಂದ ಬಿಷಪ್ ಕಾಟನ್ ಬಾಲಕರ ಶಾಲೆ ವಿರುದ್ಧ; ಸರ್ಕಾರಿ ಪ್ರೌಢಶಾಲೆ, ಪಾಟರಿಟೌನ್ ತಂಡ 6–0ಯಿಂದ ಸೇಂಟ್ ಅಲೋಸಿಯಸ್ ಪ್ರೌಢಶಾಲೆ ವಿರುದ್ಧ; ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲಾ ತಂಡವು 3–1ರಿಂದ ಇನ್ವೆಂಚರ್ ಅಕಾಡೆಮಿ ವಿರುದ್ಧ; ಗ್ರೀನ್ವುಡ್ ಪ್ರೌಢಶಾಲಾ ತಂಡವು 2–0ಯಿಂದ ಸ್ಟೆಪ್ ಬೈ ಸ್ಟೆಪ್ ಪ್ರೌಢಶಾಲೆ (ಉದಯಪುರ) ವಿರುದ್ಧ; ಪರಿಕ್ರಮ ಸೆಂಟರ್ ಫಾರ್ ಲರ್ನಿಂಗ್ ತಂಡವು 1–0ಯಿಂದ ರೈಯಾನ್ ಅಂತರರಾಷ್ಟ್ರೀಯ ಶಾಲೆ ವಿರುದ್ಧ ಗೆಲುವು ಸಾಧಿಸಿದವು.