ADVERTISEMENT

ಫುಟ್‌ಬಾಲ್: ಕೇರಳಕ್ಕೆ ಮಣಿದ ಕಾರ್ಬೆಟ್‌

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 18:49 IST
Last Updated 7 ಅಕ್ಟೋಬರ್ 2021, 18:49 IST
ಗೋಲು ಗಳಿಸಿದ ಕೇರಳ ತಂಡದ ಆಟಗಾರನ ಸಂಭ್ರಮ –ಎಐಎಫ್‌ಎಫ್‌ ವೆಬ್‌ಸೈಟ್ ಚಿತ್ರ
ಗೋಲು ಗಳಿಸಿದ ಕೇರಳ ತಂಡದ ಆಟಗಾರನ ಸಂಭ್ರಮ –ಎಐಎಫ್‌ಎಫ್‌ ವೆಬ್‌ಸೈಟ್ ಚಿತ್ರ   

ಬೆಂಗಳೂರು: ಮೊದಲ ‍ಪಂದ್ಯದಲ್ಲಿ ನೀರಸ ಆಟವಾಡಿದ ಕೇರಳ ಯುನೈಟೆಡ್ ಎಫ್‌ಸಿ ತಂಡ ಐ–ಲೀಗ್ ಅರ್ಹತಾ ಟೂರ್ನಿಯ ಎರಡನೇ ಪಂದ್ಯದಲ್ಲಿ ಚೇತರಿಸಿಕೊಂಡಿತು. ಗುರುವಾರ ನಡೆದ ಪಂದ್ಯದಲ್ಲಿ ತಂಡ ಕಾರ್ಬೆಟ್ ಎಫ್‌ಸಿಯನ್ನು 2–0 ಗೋಲುಗಳಿಂದ ಮಣಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶಿಸ್ತಿನ ಆಟ ಪ್ರದರ್ಶಿಸಿದ ಕೇರಳ ಯುನೈಟೆಡ್‌ ಎರಡು ಅವಧಿಯಲ್ಲಿ ಒಂದೊಂದು ಗೋಲು ಗಳಿಸಿತು. ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಡದೇ ಏಕಪಕ್ಷೀಯ ಜಯ ಸಾಧಿಸಿತು. ಹಫೀಜ್ ಮೊಹಮ್ಮದಾಲಿ 41ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಮುನ್ನಡೆ ತಂದುಕೊಟ್ಟರು. 83ನೇ ನಿಮಿಷದಲ್ಲಿ ಬದಲಿ ಆಟಗಾರ ಜೆಸಿನ್ ತೋಣಿಕ್ಕರ ಗೋಲು ಗಳಿಸಿದರು.

ಈ ಜಯದೊಂದಿಗೆ ಕೇರಳ ತಂಡ ನಾಕ್‌ ಔಟ್ ಹಂತಕ್ಕೇರುವ ಕನಸನ್ನು ಜೀವಂತವಾಗಿರಿಸಿದೆ. ಅರ್ಜುನ್ ಜಯರಾಜ್ ಮುನ್ನಡೆಸುತ್ತಿರುವ ತಂಡ ಗುರುವಾರದ ಪಂದ್ಯದ ಆರಂಭದಿಂದಲೇ ಪಾರಮ್ಯ ಮೆರೆಯಿತು. 30 ನಿಮಿಷಗಳ ನಂತರ ಆಕ್ರಮಣವನ್ನು ಹೆಚ್ಚಿಸಿತು. 23ನೇ ನಿಮಿಷದಲ್ಲಿ ಹಿಮಾಂಶು ಪಾಟೀಲ್ ಮತ್ತು ಜಾನ್ ಚಿಡಿ ಅವರ ಹೊಂದಾಣಿಕೆಯ ಆಟದಿಂದ ಕಾರ್ಬೆಟ್ ತಂಡಕ್ಕೆ ಗೋಲು ಗಳಿಸಲು ಉತ್ತಮ ಅವಕಾಶ ಒದಗಿತ್ತು. ಆದರೆ ಯಶಸ್ಸು ಕಾಣಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.