ನವದೆಹಲಿ: ಭಾರತ ಫುಟ್ಬಾಲ್ ತಂಡದ ನಾಯಕ ಹಾಗೂ ಖ್ಯಾತ ಸ್ಟ್ರೈಕರ್ ಸುನಿಲ್ ಚೆಟ್ರಿ ಅವರಿಗೆ ಕೋವಿಡ್–19 ಇರುವುದು ದೃಢಪಟ್ಟಿದೆ. ಹೀಗಾಗಿ, ಇದೇ ತಿಂಗಳ 25ರಂದು ಒಮನ್ ಎದುರು ಮತ್ತು 29ರಂದು ಯುಎಇ ಎದುರು ನಡೆಯಲಿರುವ ಸೌಹಾರ್ದ ಪಂದ್ಯದಿಂದ ಅವರು ದೂರ ಉಳಿಯಬೇಕಾಗಿದೆ.
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಪರ ಆಡುತ್ತಿರುವ ಚೆಟ್ರಿ ಕೋವಿಡ್ ತಗುಲಿರುವುದನ್ನು ಸಾಮಾಜಿಕ ತಾಣಗಳ ಮೂಲಕ ಗುರುವಾರ ಬಹಿರಂಗಪಡಿಸಿದ್ದು ‘ಯಾವುದೇ ತೊಂದರೆ ಇಲ್ಲ, ಹೀಗಾಗಿ ಶೀಘ್ರದಲ್ಲೇ ಸ್ಪರ್ಧಾ ಕಣಕ್ಕೆ ಮರಳಲಿದ್ದೇನೆ. ಎಲ್ಲರೂ ಅರೋಗ್ಯದ ಬಗ್ಗೆ ಕಾಳಜಿ ವಹಿಸಿ’ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳ ಕೊನೆಯ ವರೆಗೂ ಐಎಸ್ಎಲ್ ಟೂರ್ನಿಯಲ್ಲಿ ಆಡಿದ್ದ ಅವರು ಗೋವಾದಲ್ಲಿ ಬಯೊಸೆಕ್ಯೂರ್ ವ್ಯವಸ್ಥೆಯಲ್ಲಿದ್ದರು. ಪ್ಲೇ ಆಫ್ ಹಂತಕ್ಕೇರಲಾಗದೆ ತಂಡದ ವಾಪಸಾಗಿತ್ತು. ಫೆಬ್ರುವರಿ 25ರಂದು ತಂಡ ಕೊನೆಯ ಲೀಗ್ ಪಂದ್ಯ ಆಡಿತ್ತು. ನಾಯಕ ಚೆಟ್ರಿ ಅದರಲ್ಲಿ ಕಣಕ್ಕೆ ಇಳಿದಿದ್ದರು. ಗೋಲನ್ನೂ ಗಳಿಸಿದ್ದರು. ತಂಡ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿತ್ತು.
ಒಮಾನ್ ಮತ್ತು ಯುಎಇ ಎದುರಿನ ಪಂದ್ಯಗಳಿಗೆ ಸಜ್ಜಾಗಲು ರಾಷ್ಟ್ರೀಯ ತಂಡಕ್ಕೆ ಇದೇ 15ರಿಂದ ತರಬೇತಿ ಶಿಬಿರ ನಡೆಯಲಿದೆ. 2019ರ ನವೆಂಬರ್ನಲ್ಲಿ ಭಾರತ ಕೊನೆಯದಾಗಿ ಅಂತರರಾಷ್ಟ್ರೀಯ ಪಂದ್ಯ ಆಡಿತ್ತು. 2022ರ ಫಿಫಾ ವಿಶ್ವಕಪ್ ಟೂರ್ನಿಯ ಅರ್ಹತಾ ಪಂದ್ಯಗಳಲ್ಲಿ ಅಫ್ಗಾನಿಸ್ತಾನ ಮತ್ತು ಒಮಾನ್ ವಿರುದ್ಧ ಕ್ರಮವಾಗಿ ತಜಿಕಿಸ್ತಾನ ಮತ್ತು ಮಸ್ಕತ್ನಲ್ಲಿ ಸೆಣಸಿತ್ತು. ಅರ್ಹತಾ ಸುತ್ತಿನಿಂದ ಈಗಾಗಲೇ ಹೊರಬಿದ್ದಿರುವ ತಂಡ ಅಫ್ಗಾನಿಸ್ತಾನ ಮತ್ತು ಏಷ್ಯನ್ ಚಾಂಪಿಯನ್ ಕತಾರ್ ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳನ್ನು ಆಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.