ADVERTISEMENT

ಬಾಕ್ಸಿಂಗ್‌: ಖೇಲ್‌ರತ್ನ ಪ್ರಶಸ್ತಿಗೆ ಅಮಿತ್, ವಿಕಾಸ್‌ ಹೆಸರು ಶಿಫಾರಸು

ಧ್ಯಾನ್‌ಚಂದ್‌ ಪ್ರಶಸ್ತಿಗೆ ಉಷಾ ಹೆಸರು ಶಿಫಾರಸು

ಪಿಟಿಐ
Published 1 ಜೂನ್ 2020, 19:45 IST
Last Updated 1 ಜೂನ್ 2020, 19:45 IST
ಅಮಿತ್‌ ಪಂಗಲ್‌
ಅಮಿತ್‌ ಪಂಗಲ್‌   

ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಅಮಿತ್‌ ಪಂಗಲ್‌, ಅನುಭವಿ ಬಾಕ್ಸರ್‌ ವಿಕಾಸ್ ಕೃಷ್ಣನ್‌ ಅವರನ್ನು ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಸೋಮವಾರ ರಾಜೀವ್‌ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮಕರಣ ಮಾಡಿದೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಬಾಕ್ಸರ್‌ಗಳನ್ನಷ್ಟೇ ಬಿಎಫ್‌ಐ, ವಾರ್ಷಿಕ ಕ್ರೀಡಾ ಪ್ರಶಸ್ತಿಗಳಿಗೆ ಶಿಫಾರಸು ಮಾಡಿದೆ.

ವಿಶ್ವ ಕಂಚಿನ ಪದಕ ವಿಜೇತ ಲವ್ಲಿನಾ ಬೊರ್ಗೊಹೇನ್‌ (69 ಕೆ.ಜಿ ವಿಭಾಗ), ಸಿಮ್ರನ್‌ಜಿತ್‌ ಕೌರ್ (64 ಕೆ.ಜಿ) ಮತ್ತು ಮನಿಷ್‌ ಕೌಶಿಕ್‌ (63 ಕೆ.ಜಿ) ಅವರನ್ನು ಅರ್ಜುನ ಪ್ರಶಸ್ತಿಗೆ ಹೆಸರಿಸಿದೆ. ಬೊರ್ಗೊಹೆನ್‌ ಕಳೆದ ವರ್ಷ ಸೇರಿದಂತೆ ಎರಡು ಬಾರಿ ವಿಶ್ವ ಕೂಟದಲ್ಲಿ ಕಂಚಿನ ಪದಕ ಕೊರಳಿಗೆ ಹಾಕಿಕೊಂಡಿದ್ದಾರೆ.

ADVERTISEMENT

ಮಹಿಳಾ ತಂಡದ ಕೋಚ್‌ ಮೊಹಮ್ಮದ್‌ ಅಲಿ ಕಮರ್‌ ಮತ್ತು ಸಹಾಯಕ ಕೋಚ್‌ ಚೋಟೆಲಾಲ್‌ ಯಾದವ್‌ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಬಾಕ್ಸರ್‌ಗಳ ಸಾಧನೆಯನ್ನು ಪ್ರಶಸ್ತಿಗೆ ಮಾನದಂಡವಾಗಿ ಪರಿಗಣಿಸಲಾಗಿದೆ ಎಂದು ಬಿಎಫ್‌ಐ ತಿಳಿಸಿದೆ. ಪಂಗಲ್‌ (52 ಕೆ.ಜಿ ವಿಭಾಗ) ಏಷ್ಯನ್‌ ಚಾಂಪಿಯನ್‌ ಕೂಡ ಆಗಿದ್ದಾರೆ.

28 ವರ್ಷದ ವಿಕಾಸ್‌ ಕೃಷ್ಣನ್‌ 69 ಕೆ.ಜಿ ವಿಭಾಗದ ಬಾಕ್ಸರ್‌ ಆಗಿದ್ದು, 2012ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಅವರು ಜೋರ್ಡಾನ್‌ನಲ್ಲಿ ನಡೆದ ಏಷ್ಯನ್‌ ಅರ್ಹತಾ ಕೂಟದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.

ಮನಿಷ್ ಕೌಶಿಕ್‌ ಕಳೆದ ಕೆಲವು ವರ್ಷಗಳಿಂದ ಉತ್ತಮ ಸಾಧನೆ ತೋರುತ್ತಿದ್ದು, ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಡಿದ್ದರು. ಆ ಮೂಲಕ ಒಲಿಂಪಿಕ್ಸ್‌ಗೂ ಟಿಕೆಟ್‌ ಕಾದಿರಿಸಿದ್ದರು.

ಆರು ಸಲದ ವಿಶ್ವ ಚಾಂಪಿಯನ್‌ ಎಂ.ಸಿ.ಮೇರಿಕೋಮ್‌, ತಾವು ಆಟದ ಮೇಲೆ ಗಮನ ಕೇಂದ್ರೀಕರಿಸುವಲ್ಲಿ ಯಾದವ್‌ ಅವರ ಪಾತ್ರದ ಬಗ್ಗೆ ಪ್ರಸ್ತಾಪಿಸಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ ಮಾಜಿ ಪದಕ ವಿಜೇತೆ ಮಾಜಿ ಬಾಕ್ಸರ್‌ ಎನ್‌.ಉಷಾ ಅವರನ್ನು ಧ್ಯಾನ್‌ಚಂದ್‌ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.