ADVERTISEMENT

ರೈತರಿಗೆ ಬೆಂಬಲ: ಖೇಲ್ ರತ್ನ ಪ್ರಶಸ್ತಿ ಹಿಂದಿರುಗಿಸಲು ವಿಜೇಂದರ್ ನಿರ್ಧಾರ

ಪಿಟಿಐ
Published 7 ಡಿಸೆಂಬರ್ 2020, 1:32 IST
Last Updated 7 ಡಿಸೆಂಬರ್ 2020, 1:32 IST
ಬಾಕ್ಸರ್ ಹಾಗೂ ಕಾಂಗ್ರೆಸ್ ಮುಖಂಡ ವಿಜೇಂದರ್ ಸಿಂಗ್
ಬಾಕ್ಸರ್ ಹಾಗೂ ಕಾಂಗ್ರೆಸ್ ಮುಖಂಡ ವಿಜೇಂದರ್ ಸಿಂಗ್   

ನವದೆಹಲಿ: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿರುವ ಬಾಕ್ಸರ್ ಹಾಗೂ ಕಾಂಗ್ರೆಸ್ ಮುಖಂಡ ವಿಜೇಂದರ್ ಸಿಂಗ್ ‘ಘೋರ ಕಾಯ್ದೆ’ಗಳನ್ನು ಹಿಂಪಡೆಯದೇ ಇದ್ದರೆ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿಗೆ ತೆರಳಿದ ವಿಜೇಂದರ್ ಬೆಂಬಲ ಸೂಚಿಸಿದರು. ಹರಿಯಾಣದವರಾದ 35 ವರ್ಷದ ವಿಜೇಂದರ್ ಅವರು ಒಲಿಂಪಿಕ್ಸ್‌ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಅವರ ಸಹೋದರ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

‘ಸರ್ಕಾರ ಅತಿಯಾಗಿ ವರ್ತಿಸುತ್ತಿದೆ. ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ರೈತರಿಗೆ ಬೆಂಬಲ ಸೂಚಿಸಲು ನಿರ್ಧರಿಸಿದ್ದೇನೆ. ಇನ್ನೂ ಸರ್ಕಾರ ತನ್ನ ಹಠವನ್ನು ಬಿಡದೇ ಇದ್ದರೆ ಪ್ರಶಸ್ತಿ ವಾಪಸ್ ಮಾಡುತ್ತೇನೆ’ ಎಂದು ರೈತರನ್ನುದ್ದೇಶಿಸಿ ಮಾತನಾಡಿದ ವಿಜೇಂದರ್ ತಿಳಿಸಿದರು.

ADVERTISEMENT

‘ರೈತರು ಮತ್ತು ಸೈನಿಕರ ಮನೆತನದಿಂದ ಬಂದವ ನಾನು. ಆದ್ದರಿಂದ ಅವರ ನೋವು ಏನೆಂದು ನನಗೆ ಗೊತ್ತಿದೆ. ಸರ್ಕಾರ ಈಗ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು’ ಎಂದು ಅವರು ಕೋರಿದರು.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ವಿಜೇಂದರ್ ಸಿಂಗ್ ಕಂಚಿನ ಪದಕ ಗಳಿಸಿದ್ದರು. 2009ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದ ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡರು. ಈಗ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಅವರು 2019ರ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.

ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದೊಂದಿಗೆ ಇದ್ದ ರಾಷ್ಟ್ರೀಯ ಮಾಜಿ ಬಾಕ್ಸಿಂಗ್ ಕೋಚ್ ಗುರುಭಕ್ಷ್ ಸಿಂಗ್ ಅವರು ದ್ರೋಣಾಚಾರ್ಯ ಪ್ರಶಸ್ತಿಯನ್ನು ವಾಪಸ್ ಮಾಡುವುದಾಗಿ ಹೇಳಿದ್ದರು. ವಿಜೇಂದರ್ ಸಿಂಗ್ ಜೊತೆ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಕರ್ತಾರ್ ಸಿಂಗ್, ಅರ್ಜುನ ಪ್ರಶಸ್ತಿ ಗಳಿಸಿರುವ ಬ್ಯಾಸ್ಕೆಟ್‌ಬಾಲ್ ಆಟಗಾರ ಸಜ್ಜನ್ ಸಿಂಗ್ ಚೀಮಾ ಮತ್ತು ಹಾಕಿ ಆಟಗಾರ ರಾಜ್‌ಬೀರ್ ಕೌರ್ ಕೂಡ ಪ್ರಶಸ್ತಿಗಳನ್ನು ವಾಪಸ್ ಮಾಡಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.