ಬೆಂಗಳೂರು: ಪೆನಾಲ್ಟಿ ಶೂಟೌಟ್ ಮತ್ತು ಸಡನ್ ಡೆತ್ನಲ್ಲಿ ಕೈಚಳಕ ತೋರಿದ ವೀರಣ್ಣ ಗೌಡ, ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಶನಿವಾರ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು.
ವೀರಣ್ಣ ಅವರ ಅಮೋಘ ಆಟದಿಂದಾಗಿ ಸಾಯ್ ತಂಡ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.
ಸೆಮಿಫೈನಲ್ನಲ್ಲಿ ಸಾಯ್ ತಂಡ ಸಡನ್ ಡೆತ್ನಲ್ಲಿ 6–5 ಗೋಲುಗಳಿಂದ ಡಿವೈಇಎಸ್ ತಂಡವನ್ನು ಮಣಿಸಿತು.
ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1–1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಸಾಯ್ ಪರ ವೀರಣ್ಣ 19ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಡಿವೈಇಎಸ್ ತಂಡದ ಎನ್.ಕುಮಾರ್ 24ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.
ಪೆನಾಲ್ಟಿ ಶೂಟೌಟ್ನಲ್ಲಿ ಸಾಯ್ ತಂಡದ ವೀರಣ್ಣ, ಮೊಹಮ್ಮದ್ ರಾಹೀಲ್ ಮತ್ತು ಶಮಂತ್ ಗೋಲು ಬಾರಿಸಿದರು. ವೀರಣ್ಣ ಪೆನಾಲ್ಟಿ ಸ್ಟ್ರೋಕ್ ಮೂಲಕವೂ ಚೆಂಡನ್ನು ಗುರಿ ತಲುಪಿಸಿದರು.
ಡಿವೈಇಎಸ್ ಪರ ಪವನ್ ಮಡಿವಾಳರ್, ಎನ್.ಕುಮಾರ್, ವಸಂತ್ ಮತ್ತು ಡಿ.ಯು.ಶ್ರೀಕಾಂತ್ ಅವರು ಗೋಲು ಹೊಡೆದಿದ್ದರಿಂದ ಮತ್ತೆ ಸಮಬಲ ಕಂಡುಬಂತು. ಸಡನ್ ಡೆತ್ನಲ್ಲಿ ಮತ್ತೊಮ್ಮೆ ಕೈಚಳಕ ತೋರಿದ ವೀರಣ್ಣ, ಸಾಯ್ ತಂಡದ ಸಂಭ್ರಮಕ್ಕೆ ಕಾರಣರಾದರು.
ದಿನದ ಇನ್ನೊಂದು ಸೆಮಿಫೈನಲ್ನಲ್ಲಿ ಕೆನರಾ ಬ್ಯಾಂಕ್ 2–1 ಗೋಲುಗಳಿಂದ ಕೊಡವ ಸಮಾಜ ತಂಡವನ್ನು ಮಣಿಸಿತು.
ಕೆನರಾ ಬ್ಯಾಂಕ್ ತಂಡದ ಕೆ.ಪಿ.ಸೋಮಯ್ಯ ಮತ್ತು ವರ್ಗೀಸ್ ಜಾನ್ ಅವರು 33 ಮತ್ತು 37ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಕೊಡವ ಸಮಾಜ ತಂಡದ ಬಿ.ಪಿ.ಸೋಮಣ್ಣ 42ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸೋಲಿನ ನಡುವೆಯೂ ಗಮನ ಸೆಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.