ಬೆಂಗಳೂರು: ಕುದುರೆ ರೇಸ್ ಕ್ರೀಡೆಯಲ್ಲಿ ಮಹತ್ವದ ಬದಲಾವಣೆ ತರಲಿದೆ ಎನ್ನಲಾಗಿರುವ ನ್ಯಾಷನಲ್ ಕಂಬೈನ್ಡ್ ಟೊಟಲೈಸೆಟರ್ ಸಿಸ್ಟಮ್ (ಎನ್ಸಿಟಿಎಸ್) ಆಗಸ್ಟ್ 1ರಿಂದ ಏಳು ಟರ್ಫ್ ಕ್ಲಬ್ಗಳಲ್ಲಿ ಜಾರಿಯಾಗಲಿದೆ.
‘ದೇಶದ ಎಲ್ಲ ಪಂಟರ್ಸ್, ಹೂಡಿಕೆದಾರರು ಮತ್ತು ಟರ್ಫ್ ಕ್ಲಬ್ಗಳ ಪದಾಧಿಕಾರಿಗಳು ಹೊಸ ಪದ್ಧತಿಯ ಜಾರಿಗೆ ಉತ್ಸುಕರಾಗಿದ್ದಾರೆ. ಆಗಸ್ಟ್ ಒಂದರಂದು ಹೈದರಾಬಾದ್ ರೇಸ್ನೊಂದಿಗೆ ಈ ಪದ್ಧತಿಯು ಜಾರಿಯಾಗುತ್ತಿರುವುದು ಸಂತಸ ತಂದಿದೆ’ ಎಂದು ಬೆಂಗಳೂರು ಟರ್ಫ್ ಕ್ಲಬ್ ಅಧ್ಯಕ್ಷ ಕೆ. ಉದಯ್ ಈಶ್ವರನ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರು ಟರ್ಫ್ ಕ್ಲಬ್, ಮದ್ರಾಸ್ ರೇಸ್ ಕ್ಲಬ್, ರಾಯಲ್ ವೆಸ್ಟರ್ನ್ ಇಂಡಿಯಾ ಟರ್ಫ್ ಕ್ಲಬ್ ಲಿಮಿಟೆಡ್, ಹೈದರಾಬಾದ್ ರೇಸ್ ಕ್ಲಬ್, ಮೈಸೂರು ರೇಸ್ ಕ್ಲಬ್, ಡೆಲ್ಲಿ ರೇಸ್ ಕ್ಲಬ್, ರಾಯಲ್ ಕಲ್ಕತ್ತಾ ಟರ್ಫ್ ಕ್ಲಬ್ಗಳು ಎನ್ಸಿಟಿಎಸ್ ಒಪ್ಪಂದಕ್ಕೆ ಸಹಿ ಹಾಕಿವೆ’ ಎಂದರು.
‘ಒಂದು ದೇಶ, ಒಂದು ಟೋಟ್ʼ ಆಶಯದಂತೆ ಕೊಮ್ಲಿಂಗ್ಲಿಂಗ್ ಟೋಟ್ ಇದಾಗಲಿದೆ. ಇದರಡಿಯಲ್ಲಿ ದೇಶದ ಎಲ್ಲಾ ರೇಸ್ ಕ್ಲಬ್ಗಳ ವಿನ್, ಪ್ಲೇಸ್, ಸೆಕೆಂಡ್ ಹಾರ್ಸ್ ಪೂಲ್, ಜಾಕ್ಪಾಟ್, ಮಿನಿ ಜಾಕ್ಪಾಟ್ ಇತ್ಯಾದಿ ಟೋಟ್ಗಳನ್ನು ಒಂದುಗೂಡಿಸಿ ಒಂದೇ ತೆರನಾದ ಡಿವಿಡೆಂಡ್ ಗಳನ್ನು ನೀಡಲಾಗುವುದು. ಈ ವಿಧಾನದಿಂದ ಬೆಟ್ಟಿಂಗ್ ಮಾಡುವವರಿಗೆ ಹೆಚ್ಚಿನ ಡಿವಿಡೆಂಡ್ ಸಿಗಲಿದೆ. ರೇಸ್ ಕ್ಲಬ್ಗಳು ತಮ್ಮ ವಹಿವಾಟು ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗಲಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಟರ್ಫ್ ಅಥಾರಿಟಿ ಆಫ್ ಇಂಡಿಯಾದ ಜಿಎಸ್ಟಿ ಸುಧಾರಣ ಘಟಕದ ಮುಖ್ಯಸ್ಥ ಜವಾರೆ ಎಸ್ ಪೂನಾವಾಲಾ, ‘ಉದಯ್ ಈಶ್ವರನ್ ಅವರು ಅಭಿನಂದನಾರ್ಹರು. ದೇಶದ ರೇಸಿಂಗ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿರುವ ಈ ಪದ್ಧತಿಯನ್ನು ಜಾರಿಗೊಳಿಸಲು ಏಳು ಕೇಂದ್ರಗಳನ್ನು ಸಿದ್ಧಗೊಳಿಸಿದ್ದಾರೆ. ಉದಯ್, ಹರಿಮೋಹನ್ ನಾಯ್ಡು ಮತ್ತು ರಮೇಶ್ ರಂಗರಾಜನ್ ಅವರ ಪ್ರಯತ್ನದಿಂದ ಎನ್ಸಿಟಿಸಿ ಜಾರಿಯಾಗುತ್ತಿದೆ’ ಎಂದರು.
ಇದೇ ಸಂದರ್ಭದಲ್ಲಿ ಭಾನುವಾರ ನಡೆಯಲಿರುವ ಬೆಟ್ವೇ ಬೆಂಗಳೂರು ಬೇಸಿಗೆ ಡರ್ಬಿಯ ಟ್ರೋಫಿಯನ್ನು ಉದಯ್ ಈಶ್ವರನ್ ಮತ್ತು ಬೆಟ್ವೇ ಕಂಪೆನಿಯ ಸಿಇಒ ರೋಹನ್ ಗುಪ್ತಾ ಅನಾವರಣಗೊಳಿಸಿದರು.ಬೆಟ್ವೇ ಇದೇ ಮೊದಲ ಬಾರಿಗೆ ಭಾರತದಲ್ಲಿ ಕುದುರೆ ರೇಸ್ಗೆ ಪ್ರಾಯೋಜಕತ್ವ ನೀಡುತ್ತಿದೆ.ಈ ರೇಸ್ನಲ್ಲಿ ಸ್ಪರ್ಧಿಸುತ್ತಿರುವ 13 ಕುದುರೆಗಳ ಕ್ರಮಸಂಖ್ಯೆಗಳ ಡ್ರಾ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.