ನವದೆಹಲಿ: ಪ್ಯಾರಾಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿರುವ ಭಾರತದ ಅಥ್ಲೀಟ್ಗಳ ಮೊದಲ ತಂಡವು ಬುಧವಾರ ಟೋಕಿಯೊಗೆ ಪ್ರಯಾಣ ಬೆಳೆಸಿತು. ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ತಂಡವನ್ನು ಅದ್ದೂರಿಯಾಗಿ ಬೀಳ್ಕೊಡಲಾಯಿತು.
ಎಂಟು ಸದಸ್ಯರ ಗುಂಪನ್ನು ಕ್ರೀಡಾ ಸಚಿವಾಲಯ, ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಮತ್ತು ಭಾರತ ಪ್ಯಾರಾಲಿಂಪಿಕ್ ಸಮಿತಿ (ಪಿಸಿಐ) ಅಧಿಕಾರಿಗಳು ಕಳುಹಿಸಿಕೊಟ್ಟರು. ಭಾರತದ ಧ್ವಜಧಾರಿ ಮರಿಯಪ್ಪನ್ ತಂಗವೇಲು, ಟೆಕ್ ಚಾಂದ್, ವಿನೋದ್ ಕುಮಾರ್ ಈ ತಂಡದಲ್ಲಿದ್ದರು.
‘ಪ್ರಧಾನ ಮಂತ್ರಿ, ಕ್ರೀಡಾ ಸಚಿವರು ಸೇರಿದಂತೆ ಇಡೀ ದೇಶ ಇವತ್ತು ನಮ್ಮನ್ನು ಹುರಿದುಂಬಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿರುವ ನೀವೆಲ್ಲರೂ ಈಗಾಗಲೇ ಜಯಶಾಲಿಗಳಾಗಿದ್ದೀರಿ, ಶುಭವಾಗಲಿ‘ ಎಂದು ಪಿಸಿಐ ಅಧ್ಯಕ್ಷೆ ದೀಪಾ ಮಲಿಕ್ ಹೇಳಿದ್ದಾರೆ.
ಮೊದಲ ಬಾರಿಗೆ, ವೀಲ್ಚೇರ್ನಲ್ಲಿರುವ ಕ್ರೀಡಾಪಟುಗಳ ಪ್ರಯಾಣಕ್ಕಾಗಿ ಪಿಸಿಐನ ಪಾಲುದಾರ ಸಂಸ್ಥೆಯಾದ ಸ್ವಯಂ ಇಂಡಿಯಾ ಮೂಲಕ ವಾಹನಗಳನ್ನು ಒದಗಿಸಲಾಯಿತು.
ಹರಿಯಾಣದ ರೇವಾರಿಯಿಂದ ಪ್ರಯಾಣಿಸಿದ ಅಥ್ಲೀಟ್ ಟೆಕ್ ಚಾಂದ್ ಮತ್ತು ನೋಯ್ಡಾದಿಂದ ವಿಮಾನ ನಿಲ್ದಾಣವನ್ನು ತಲುಪಿದ ದೀಪಾ ಮಲಿಕ್ ಈ ವಾಹನಗಳನ್ನು ಬಳಸಿದರು.
ಪ್ಯಾರಾಲಿಂಪಿಕ್ಸ್ ಕೂಟವು ಇದೇ 24ರಂದು ಆರಂಭವಾಗಲಿದೆ. 25ರಿಂದ ಟೇಬಲ್ ಟೆನಿಸ್ ಆಟಗಾರ್ತಿಯರಾದ ಭವಿನಾ ಪಟೇಲ್ ಮತ್ತು ಸೋನಲ್ ಪಟೇಲ್ ಕಣಕ್ಕಿಳಿಯುವುದರೊಂದಿಗೆ ಭಾರತದ ಅಭಿಯಾನ ಆರಂಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.